ಕನಕಪುರ: ಹಳೆ ದ್ವೇಷದ ಹಿನ್ನಲೆಯಲ್ಲಿ ತನ್ನ ಸ್ನೇಹಿತನನ್ನು ಕೊಲೆ ಮಾಡಲು ಮನೆಗೆ ನುಗ್ಗಿದ ಗುಂಪೊಂದು, ಆತನ ತಂದೆಯನ್ನು ಕೊಲೆ ಮಾಡಿರುವ ಘಟನೆ ನಗರದ ಕುರುಪೇಟೆಯ ಮಾಧವನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಮಾಧವನಗರದ ಗುಂಡಯ್ಯ (45) ಮೃತರು. ಕೃತ್ಯ ಎಸಗಿದ ಕರಡಿಗುಡ್ಡೆಯ ಅರುಣ್ ಹಾಗೂ ಆತನ ಮೂವರು ಸಹಚರರನ್ನು ಕನಕಪುರ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಲೆಯಾದ ಗುಂಡಯ್ಯ ಅವರ ಪುತ್ರ ರುದ್ರೇಶ್ ಹಾಗೂ ಮುಖ್ಯ ಆರೋಪಿ ಅರುಣ್ ಸ್ನೇಹಿತರು. ಜನ್ಮದಿನಕ್ಕೆ ‘ಪಾರ್ಟಿ‘ ಕೊಡಿಸಿಲ್ಲವೆಂದು ಇದೇ ರುದ್ರೇಶ್ ಕಳೆದ ಯುಗಾದಿ ಸಂದರ್ಭದಲ್ಲಿ ಅರುಣ್ ಜೊತೆ ಜಗಳವಾಡಿ ಚಾಕುವಿನಿಂದ ಇರಿದಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರುದ್ರೇಶ್ನನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು.
ಎರಡು ದಿನಗಳ ಹಿಂದೆಯಷ್ಟೇ ರುದ್ರೇಶ್ ಜೈಲಿನಿಂದ ಬಿಡುಗಡೆಯಾಗಿದ್ದ. ತನ್ನ ಕೊಲೆಗೆ ಯತ್ನಿಸಿದ್ದ ಆತನ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ ಅರುಣ್, ಸಂಜೆ 7.30ರ ಸುಮಾರಿಗೆ ಮೂವರು ಸಹಚರರೊಂದಿಗೆ ರುದ್ರೇಶ್ ಮನೆಗೆ ಮಾರಕಾಸ್ತ್ರಗಳೊಂದಿಗೆ ನುಗ್ಗಿದ್ದ. ರುದ್ರೇಶ್ ಮೇಲೆ ಹಲ್ಲೆ ನಡೆಸಲು ಮುಂದಾದಾಗ ಆತನ ತಂದೆ ಗುಂಡಯ್ಯ ತಡೆಯಲು ಬಂದಿದ್ದಾರೆ.
ಆಗ ಅವರ ತಲೆಗೆ ರಾಡ್ನಿಂದ ಬಲವಾದ ಪೆಟ್ಟು ಬಿದ್ದಿದೆ. ಏಟಿನ ರಭಸಕ್ಕೆ ಗುಂಡಯ್ಯ ಕುಸಿದು ನೆಲಕ್ಕೆ ಬಿದಿದ್ದಾರೆ. ರಕ್ತದ ಮಡುವಿನಲ್ಲಿದ್ದ ಅವರನ್ನು ಕಂಡ ಅರುಣ್ ಮತ್ತು ತಂಡ ಸ್ಥಳದಿಂದ ಕಾಲ್ಕಿತ್ತಿದೆ. ಕುಟುಂಬದವರು ಮತ್ತು ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದೊಯ್ಯಬೇಕೆನ್ನುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು ಎಂದು ಪೊಲೀಸ್ ಇನ್ಸ್ಪೆಕ್ಟರ್ ಮಿಥುನ್ ಶಿಲ್ಪಿ ತಿಳಿಸಿದರು.