ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಚುನಾವಣೆಯಲ್ಲಿ ದೇವೇಗೌಡರ ಎದುರು ಸೆಣಸಿದ್ದ ಕನಕಪುರ ಬಂಡೆಗೆ ಕೆಪಿಸಿಸಿ ಪಟ್ಟ

ರಾಜಕೀಯ ಯಾನದಲ್ಲಿ ಯಾರ ವಿರುದ್ಧವೂ ಸೋಲದ ಡಿಕೆ ಶಿವಕುಮಾರ್‌ ಸೋತದ್ದು ದೇವೇಗೌಡರ ವಿರುದ್ಧವಷ್ಟೇ
Last Updated 12 ಮಾರ್ಚ್ 2020, 4:23 IST
ಅಕ್ಷರ ಗಾತ್ರ

ರಾಮನಗರ: ‘ಕನಕಪುರದ ಬಂಡೆ’ ಎಂದೇ ಖ್ಯಾತಿಯಾದ ಶಾಸಕ ಡಿ.ಕೆ. ಶಿವಕುಮಾರ್‌ಗೆ ಇದೀಗ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಹುದ್ದೆ ಅರಸಿ ಬಂದಿದೆ. ಈ ಮೂಲಕ ರಾಜ್ಯ ರಾಜಕಾರಣದಲ್ಲಿ ಡಿಕೆಶಿ ಪ್ರಭಾವ ಇನ್ನಷ್ಟು ವಿಸ್ತರಿಸಿದೆ.

ಕರ್ನಾಟಕದ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್‌ನ ಪ್ರಭಾವಿ ಮುಖಂಡರಲ್ಲಿ ಶಿವಕುಮಾರ್ ಕೂಡ ಒಬ್ಬರು. ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್‌ನ ಕಟ್ಟಾಳುವಾಗಿ ದುಡಿದ ಅವರ ನಿಷ್ಠೆಗೆ ಇದೀಗ ಫಲ ಸಂದಿದೆ.

ರೆಸಾರ್ಟ್‌ ಆತಿಥ್ಯದಿಂದ ವಿಶ್ವಾಸ ಗಳಿಕೆ: ರಾಜ್ಯ ಕಾಂಗ್ರೆಸ್‌ ಪಾಲಿನ ಟ್ರಬಲ್ ಶೂಟರ್ ಎಂದೇ ಖ್ಯಾತರಾದ ಶಿವಕುಮಾರ್‌ ಹಲವು ವಿಷಮ ಪರಿಸ್ಥಿತಿಗಳಲ್ಲಿ ಪಕ್ಷದ ಬೆನ್ನಿಗೆ ನಿಂತಿದ್ದಾರೆ. ಮೂರು ವರ್ಷದ ಹಿಂದಷ್ಟೇ ಗುಜರಾತ್‌ನಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯ ಕುದುರೆ ವ್ಯಾಪಾರಕ್ಕೆ ಹೆದರಿ ಕರ್ನಾಟಕಕ್ಕೆ ಬಂದ ಅಲ್ಲಿನ ಕಾಂಗ್ರೆಸ್ ಶಾಸಕರಿಗೆ ಬಿಡದಿಯ ಈಗಲ್‌ಟನ್‌ ರೆಸಾರ್ಟಿನಲ್ಲಿ ಆತಿಥ್ಯದ ವ್ಯವಸ್ಥೆ ಮಾಡಿದ್ದು ಇದೇ ಡಿಕೆಶಿ. ಇದೇ ಕಾರಣಕ್ಕಾಗಿ ಅವರು ಐ.ಟಿ. ದಾಳಿ ಎದುರಿಸಬೇಕಾಯಿತು. ರೆಸಾರ್ಟಿನಲ್ಲಿ ಇದ್ದಾಗಲೇ ಅವರ ಮೇಲೆ ದಾಳಿ ನಡೆದಿತ್ತು. ಅದೇನೇ ಆದರೂ ಛಲ ಬಿಡದ ಡಿ.ಕೆ. ಅದೇ ಕೆಚ್ಚೆದೆಯ ಕಾರಣಕ್ಕೆ ಸೋನಿಯಾ ಗಾಂಧಿ ಸಹಿತ ಕಾಂಗ್ರೆಸ್‌ ಹೈಕಮಾಂಡ್‌ ವಿಶ್ವಾಸ ಗಳಿಸಿದ್ದು ಸುಳ್ಳಲ್ಲ. ಈಚೆಗೆ ಕನಕಪುರದ ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣಕ್ಕೆ ಜಮೀನಿನ ಹಣ ದಾನ ಮಾಡಿಯೂ ಅವರು ಸುದ್ದಿಯಲ್ಲಿ ಇದ್ದಾರೆ.

ಪರಿಚಯ: ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಾದ ಶಿವಕುಮಾರ್‌ರದ್ದು ರಾಜ್ಯ ರಾಜಕಾರಣದಲ್ಲಿ ಅತ್ಯಂತ ಪರಿಚಿತ ಹೆಸರು. ಹಿಂದಿನ ಸಾತನೂರು ವಿಧಾನಸಭಾ ಕ್ಷೇತ್ರ ಹಾಗೂ ಹಾಲಿ ಕನಕಪುರ ಕ್ಷೇತ್ರದಿಂದ ಸತತ ಏಳನೇ ಬಾರಿ ಶಾಸಕರಾಗಿ ಆಯ್ಕೆಯಾದ ಕೀರ್ತಿ ಅವರದ್ದು.

ದೇವರಾಜ ಅರಸು ಕಾಲದಲ್ಲಿ ರಾಜಕಾರಣ ಪ್ರವೇಶ ಮಾಡಿದ ಶಿವಕುಮಾರ್ ವಿದ್ಯಾರ್ಥಿ ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಾಜಕೀಯದ ಇನ್ನಿಂಗ್ಸ್‌ ಆರಂಭಿಸಿದವರು. ಅವರು ಮೊದಲ ಬಾರಿಗೆ ಚುನಾವಣೆ ಎದುರಿಸಿದ್ದು 1985ರಲ್ಲಿ. ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾದ ಅವರಿಗೆ ಸ್ಪರ್ಧಿಯಾಗಿದ್ದು ಜನತಾ ಪಕ್ಷದ ಅಭ್ಯರ್ಥಿ ಎಚ್.ಡಿ. ದೇವೇಗೌಡ.

ಮೊದಲ ವಿಧಾನಸಭೆ ಚುನಾವಣೆಯಲ್ಲಿ ಗೌಡರ ವಿರುದ್ಧ ಸೋಲು ಕಂಡ ಶಿವಕುಮಾರ್ 1987ರಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಗೆ ಸಾತನೂರು ಕ್ಷೇತ್ರದಿಂದ ಸದಸ್ಯರಾಗಿ ಆಯ್ಕೆಯಾದರು. 1989ರ ವಿಧಾನಸಭೆಯಲ್ಲಿ ಸಾತನೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮತ್ತೆ ಕಣಕ್ಕೆ ಇಳಿದಿದ್ದ ಶಿವಕುಮಾರ್ ಗೆಲುವಿನ ನಗೆ ಬೀರಿದ್ದರು. ಅಲ್ಲಿಂದ ಇಲ್ಲಿಯವರೆಗೆ ಅವರು ತಿರುಗಿ ನೋಡಿದ್ದಿಲ್ಲ.

1994ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ವಂಚಿತರಾಗಿದ್ದ ಶಿವಕುಮಾರ್ ಪಕ್ಷೇತರರಾಗಿ ಸ್ಪರ್ಧಿಸಿ ಅಲ್ಪ ಅಂತರದ ಗೆಲುವು ಕಂಡರು. 1999ರ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮಣಿಸುವ ಮೂಲಕ ಅಪ್ಪನ ವಿರುದ್ಧ ಕಂಡಿದ್ದ ಸೋಲಿಗೆ ಮಗನ ಮೇಲೆ ಸೇಡು ತೀರಿಸಿಕೊಂಡರು. 2004ರಲ್ಲಿ ಮತ್ತೆ ಜಯ ಅವರದ್ದಾಯಿತು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆ ಬಳಿಕ ಕನಕಪುರಕ್ಕೆ ಬಂದ ಅವರು ಜಯದ ಓಟ ಮುಂದುವರಿಸಿದರು. 2013ರ ಚುನಾವಣೆಯಲ್ಲಿ ಪಿಜಿಆರ್ ಸಿಂಧ್ಯಾ ಅವರನ್ನೂ ಮಣಿಸಿದ್ದರು.

ಮಂತ್ರಿ ಪದವಿ: ಎಸ್.ಬಂಗಾರಪ್ಪ ಮತ್ತು ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಬಂಧಿಖಾನೆ, ಸಹಕಾರ, ನಗರಾಭಿವೃದ್ಧಿ ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವ ಶಿವಕುಮಾರ್‌ರದ್ದು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಇಂಧನ ಸಚಿವರಾಗಿ ಹಾಗೂ ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಜಲ ಸಂಪನ್ಮೂಲ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.
1985ರಿಂದ 2001ರವರೆಗೆ ಕೆಪಿಸಿಸಿ ಕಾರ್ಯದರ್ಶಿ, 2008ರಿಂದ 2010ರವರೆಗೆ ಕಾರ್ಯಾಧ್ಯಕ್ಷರಾಗಿ ಪಕ್ಷಕ್ಕಾಗಿ ದುಡಿದ ಅವರು ಕೆಪಿಸಿಸಿಯ ಪ್ರಚಾರ ಸಮಿತಿ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು.

ಟ್ರಬಲ್‌ ಶೂಟರ್‌: 2018ರಲ್ಲಿ ರಾಜ್ಯ ರಾಜಕಾರಣದಲ್ಲಿ ಅತಂತ್ರ ಸನ್ನಿವೇಶ ಎದುರಾದಾಗ ‘ಟ್ರಬಲ್ ಶೂಟರ್‌’ ಆಗಿ ಕಾರ್ಯ ನಿರ್ವಹಿಸಿದ್ದು ಇದೇ ಶಿವಕುಮಾರ್.

ಎಚ್‌.ಡಿ. ದೇವೇಗೌಡರ ಜೊತೆಗಿನ ರಾಜಕೀಯ ವೈಷಮ್ಯವನ್ನು ಬದಿಗೊತ್ತಿ, ಕಾಂಗ್ರೆಸ್‌ ಕೈಕಮಾಂಡ್‌ ಸೂಚನೆಯಂತೆ ಜೆಡಿಎಸ್–ಕಾಂಗ್ರೆಸ್‌ ಮೈತ್ರಿ ಸರ್ಕಾರದ ರಚನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಒಂದೂವರೆ ವರ್ಷದ ಬಳಿಕ ಸರ್ಕಾರ ಬಿದ್ದು ಹೋಗುವ ಸಂದರ್ಭದಲ್ಲೂ ಶಿವಕುಮಾರ್ ಮುಂಬೈನ ಬೀದಿಯಲ್ಲಿ ನಿಂತು ಅತೃಪ್ತ ಶಾಸಕರ ಮನವೊಲಿಕೆಗೆ ಪ್ರಯತ್ನಿಸಿದ್ದು ಅವರ ಛಲದ ರಾಜಕಾರಣಕ್ಕೆ ಸಾಕ್ಷಿ.

ಗಣಿಯ ಕುಣಿಕೆ: ಕನಕಪುರದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪ ಡಿ.ಕೆ. ಶಿವಕುಮಾರ್‌ ಹಾಗೂ ಅವರ ಸಹೋದರ ಡಿ.ಕೆ. ಸುರೇಶ್‌ ಮೇಲೆ ಇದೆ. ಇದೇ ಅವರಿಂದಾಗಿ ಅವರು ಈ ಹಿಂದೆ ಸಾಕಷ್ಟು ಅವಕಾಶಗಳಿಂದ ವಂಚಿತರಾಗಿದ್ದರು. 2013ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬಂದಾಗಲೂ ಸಚಿವ ಸ್ಥಾನಕ್ಕಾಗಿ ಅವರು ಒಂದಿಷ್ಟು ಸಮಯ ಕಾಯಬೇಕಾಗಿ ಬಂದಿತ್ತು.

ಶ್ರೀಮಂತ ಅಧ್ಯಕ್ಷ:ಕೆಪಿಸಿಸಿ ಇತಿಹಾಸದಲ್ಲೇ ಅತ್ಯಂತ ಶ್ರೀಮಂತ ಅಧ್ಯಕ್ಷ ಎನ್ನುವ ಕೀರ್ತಿ ಶಿವಕುಮಾರ್‌ರದ್ದು. 2018ರ ವಿಧಾನಸಭೆ ಚುನಾವಣೆ ಸಂದರ್ಭ ಘೋಷಿಸಿಕೊಂಡಂತೆ ಡಿಕೆಶಿಯ ಕುಟುಂಬದ ಒಟ್ಟು ಆಸ್ತಿ ಮೌಲ್ಯ ಬರೋಬ್ಬರಿ ₹ 840 ಕೋಟಿ. ಇದರಲ್ಲಿ ಅವರ ವೈಯಕ್ತಿಕ ಆಸ್ತಿ ಮೌಲ್ಯವೇ ₹ 619.8 ಕೋಟಿಯಷ್ಟಿದೆ. 2014ರ ಚುನಾವಣೆ ಸಂದರ್ಭ ಅವರ ಆಸ್ತಿ ಮೌಲ್ಯ ₹ 251 ಕೋಟಿಯಷ್ಟಿತ್ತು. ಇದಲ್ಲದೆ ಅವರ ಸಹೋದರ ಡಿ.ಕೆ. ಸುರೇಶ್‌ ಕಳೆದ ಲೋಕಸಭೆ ಚುನಾವಣೆ ಸಂದರ್ಭ ₹ 338 ಕೋಟಿ ಆಸ್ತಿ ಘೋಷಣೆ ಮಾಡಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಡಿಕೆಶಿ 2019ರಲ್ಲಿ ಎರಡು ತಿಂಗಳ ಕಾಲ ಸೆರೆವಾಸವನ್ನೂ ಅನುಭವಿಸಿದ್ದಾರೆ. ಈಗಲೂ ಐ.ಟಿ. ಇ.ಡಿ.ಯಲ್ಲಿ ಅವರ ಮೇಲೆ ಅನೇಕ ಪ್ರಕರಣಗಳು ವಿಚಾರಣೆ ಹಂತದಲ್ಲಿ ಇವೆ.

ಕನಕಪುರ ತಾಲ್ಲೂಕಿನ ದೊಡ್ಡಾಲಹಳ್ಳಿ ಗ್ರಾಮದ ಕೆಂಪೇಗೌಡ ಮತ್ತು ಗೌರಮ್ಮ ದಂಪತಿಯ ಪುತ್ರ ಶಿವಕುಮಾರ್ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದವರು. ಕುಟುಂಬದಿಂದ ಬಂದ ಕೃಷಿ ಜಮೀನಿನಲ್ಲಿನ ಆದಾಯದ ಜೊತೆಗೆ ಉದ್ದಿಮೆ, ಶಿಕ್ಷಣ ಸಂಸ್ಥೆ, ರಿಯಲ್‌ ಎಸ್ಟೇಟ್‌ ಚಟುವಟಿಕೆಗಳಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರಿಗೆ ಪತ್ನಿ ಉಷಾ, ಮೂವರು ಮಕ್ಕಳು ಇದ್ದಾರೆ.

ಡಿ.ಕೆ.ಶಿವಕುಮಾರ್ ಸೋಲು ಗೆಲುವಿನ ಗೆಲುವಿನ ಹಾದಿ

ವರ್ಷ; ಕ್ಷೇತ್ರ; ಪಕ್ಷ; ಫಲಿತಾಂಶ; ಮತಗಳ ಅಂತರ

1985;ಸಾತನೂರು; ಕಾಂಗ್ರೆಸ್‌; ಸೋಲು; 29,809
1989; ಸಾತನೂರು; ಕಾಂಗ್ರೆಸ್‌; ಗೆಲುವು; 13,650
1994; ಸಾತನೂರು; ಸ್ವತಂತ್ರ; ಗೆಲುವು; 568
1999; ಸಾತನೂರು; ಕಾಂಗ್ರೆಸ್; ಗೆಲುವು; 14,387
2004; ಸಾತನೂರು; ಕಾಂಗ್ರೆಸ್; ಗೆಲುವು; 13,928
2008; ಕನಕಪುರ; ಕಾಂಗ್ರೆಸ್‌; ಗೆಲುವು; 7,179
2013; ಕನಕಪುರ; ಕಾಂಗ್ರೆಸ್; ಗೆಲುವು; 31,424
2018; ಕನಕಪುರ; ಕಾಂಗ್ರೆಸ್; ಗೆಲುವು; 79,909

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT