ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ * ಸೌಲಭ್ಯ ಒದಗಿಸಲು ಆಗ್ರಹ
ಗೋವಿಂದರಾಜು ವಿ.
Published 13 ಮೇ 2024, 4:24 IST
Last Updated 13 ಮೇ 2024, 4:24 IST
ಅಕ್ಷರ ಗಾತ್ರ
ಹಾರೋಹಳ್ಳಿ: ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಬೀದಿ ದೀಪಗಳು ಇಲ್ಲದೆ ಕಾರ್ಮಿಕರು ಪರದಾಡುತ್ತಿದ್ದರೂ ಕೆಐಡಿಬಿಎ ಅಧಿಕಾರಿಗಳು ಕಣ್ಣುಚ್ಚಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ರಾತ್ರಿ ವೇಳೆ ಸಂಚಾ ಮಾಡುವ ಸಂದರ್ಭದಲ್ಲಿ ಎಷ್ಟೋ ಸಲ ಕೆಲವರಿಗೆ ವಿಷ ಜಂತುಗಳು ಕಚ್ಚಿರುವ ಉದಾಹರಣೆ ಇದೆ. ರಸ್ತೆಬದಿ ಗಿಡಗಳು ಸ್ವಚ್ಛ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದ್ದಾರೆ. ಪ್ರತಿ ವರ್ಷ ಸ್ವಚ್ಛತೆಗೆ ಸಾವಿರಾರು ರೂಪಾಯಿ ಇಲಾಖೆಯಿಂದ ಅನುದಾನ ಬಿಡುಗಡೆಯಾದರೂ ಸ್ವಚ್ಛತೆ ಮಾತ್ರ ಮರೀಚಿಕೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ರಾತ್ರಿ ವೇಳೆ ಸಂಚಾರ ಕಷ್ಟ: ಪ್ರತಿದಿನ ಸಾವಿರಾರು ಕಾರ್ಮಿಕರು ಅದರಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಾರೆ. ಕೆಲಸ ಮುಗಿಸಿ ಕತ್ತಲಿನಲ್ಲಿ ಮನೆಗೆ ಬರಬೇಕಾದ ಪರಿಸ್ಥಿತಿ ಇದೆ. ರಸ್ತೆ ಅಕ್ಕಪಕ್ಕ ಗಿಡಗಂಟಿ ಬೆಳೆದಿದೆ. ಹಾವು-ಚೇಳು ರಾತ್ರಿ ವೇಳೆ ರಸ್ತೆಯಲ್ಲಿಯೇ ಹರಿದಾಡುತ್ತಿವೆ.
ಕಳ್ಳರ ಹಾವಳಿ: ಕೆಲಸ ಮುಗಿಸಿಕೊಂಡು ರಾತ್ರಿ ಸಮಯದಲ್ಲಿ ನಡೆದು ಹೋಗುವಾಗ ದಾರಿಯಲ್ಲಿ ಕಳ್ಳರು ದಾಳಿ ನಡೆಸಿ ಹಣ, ಒಡವೆ ಕಿತ್ತುಕೊಂಡು ಪರಾರಿಯಾಗಿರುವ ಸಾಕಷ್ಟು ಉದಾಹರಣೆ ಇದೆ.
ವಾಹನ ಚಾಲನೆ ಕ್ಲಿಷ್ಟ: ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಲ್ಲಿ ಸರಕು ಸಾಗಾಣಿಕೆ ಮಾಡುವ ವಾಹನಗಳು ರಾತ್ರಿ ಸಮಯದಲ್ಲಿ ಹೆಚ್ಚು ಸಂಚಾರ ಮಾಡುವುದರಿಂದ ಕಾರ್ಮಿಕರು ಸ್ವಂತ ವಾಹನಗಳಲ್ಲಿ ತೆರಳುವುದು ಕೂಡ ಕಷ್ಟವಾಗಿದೆ.
ಕೋಟ್ಯಂತರ ಹಣ ವ್ಯರ್ಥ: ಕೈಗಾರಿಕಾ ಪ್ರದೇಶದ ಎಲ್ಲ ರೀತಿಯ ಮೂಲ ಸೌಕರ್ಯ ಒದಗಿಸಲು ಸರ್ಕಾರ ಅನುದಾನ ನೀಡುತ್ತಿದೆ. ಆದರೂ, ಕೂಡ ಸರಿಯಾದ ರೀತಿಯಲ್ಲಿ ಅನುದಾನ ಬಳಕೆ ಮಾಡದೆ ವ್ಯರ್ಥವಾಗುತ್ತಿದೆ.
ಭದ್ರತಾ ಸಿಬ್ಬಂದಿ ನೇಮಕಕ್ಕೆ ಆಗ್ರಹ:ರಾತ್ರಿ ವೇಳೆ ಕಾರ್ಮಿಕರು ಮನೆಗೆ ಹೋಗುವವರೆಗೂ ಭದ್ರತಾ ಸಿಬ್ಬಂದಿ ಗಸ್ತು ತಿರುಗಬೇಕು. ಬೀದಿ ದೀಪಗಳು ಇಲ್ಲದೆ ಯಾವ ವಾಹನಗಳು ಬರುತ್ತಿವೆ ಎಂಬುದು ಗೊತ್ತಾಗುವುದಿಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ಕಾರ್ಮಿಕರಿಗೆ ಅನುಕೂಲ ಮಾಡಿ ಕೊಡಬೇಕೆಂದು ಒತ್ತಾಯಿಸಿದ್ದಾರೆ.
ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಒಳ ರಸ್ತೆ ಬೀದಿ ದೀಪಗಳು ಕೆಟ್ಟು ಹೋಗಿರುವುದು
ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ದೀಪಗಳು ಕೆಟ್ಟು ಹೋಗಿರುವುದು
ಸುಮಾರು ಒಂದು ವರ್ಷದಿಂದ ಬೀದಿ ದೀಪಗಳ ಸಮಸ್ಯೆ ಇದೆ. ಈಗಾಗಲೇ ಹಲವು ಸಲ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ
–ನಾಗರಾಜು ಕಾರ್ಯದರ್ಶಿ ಹಾರೋಹಳ್ಳಿ ಕೈಗಾರಿಕಾ ಸಂಘ
‘ನಾನು ರಾತ್ರಿ ಪಾಳಿ ಕೆಲಸ ಮುಗಿಸಿಕೊಂಡು ಹೋಗುವ ಸಮಯದಲ್ಲಿ ಕೈಗಾರಿಕಾ ಪ್ರದೇಶದಲ್ಲಿ ದೀಪಗಳು ಇಲ್ಲದೇ ಸಂಚಾರ ಮಾಡಲು ಬಹಳಷ್ಟು ಕಷ್ಟವಾಗಿದೆ’