ದೇಗುಲಮಠದ ರುದ್ರಭೂಮಿ ಅಭಿವೃದ್ಧಿಪಡಿಸುವಂತೆ ಕಳೆದ ಐದು ವರ್ಷಗಳಿಂದ ನಗರಸಭೆ ಸದಸ್ಯನಾಗಿ ಒತ್ತಾಯ ಮಾಡುತ್ತಾ ಬಂದಿದ್ದೇನೆ. ನಗರಸಭೆ ನಿರ್ಲಕ್ಷ್ಯ ವಹಿಸುತ್ತಾ ಬಂದಿದೆ. ಅಂತ್ಯಸಂಸ್ಕಾರ ಮಾಡಲು ಸ್ಮಶಾನಕ್ಕೆ ಹೋದರೆ ಅಲ್ಲಿ ಕುಡಿಯುವ ನೀರಾಗಲಿ, ಕುಳಿತುಕೊಳ್ಳಲು ನೆರಳಾಗಲಿ ಇಲ್ಲ. ಗಿಡಗಂಟಿ ಎತ್ತರವಾಗಿ ಬೆಳೆದು ಆವರಿಸಿಕೊಂಡಿದೆ. ನಗರಸಭೆಯು ವೈಜ್ಞಾನಿಕವಾಗಿ ಸ್ಮಶಾನವನ್ನು ಹೈಟೆಕ್ ರೂಪದಲ್ಲಿ ಅಭಿವೃದ್ಧಿಪಡಿಸಬೇಕು.
–ಸ್ಟುಡಿಯೊ ಚಂದ್ರು, ನಗರಸಭೆ ಸದಸ್ಯ
ಸಣ್ಣಪುಟ್ಟ ಹಳ್ಳಿಗಳಲ್ಲೂ ಸ್ಮಶಾನ ಅಭಿವೃದ್ಧಿಪಡಿಸಿ ಶವ ಸುಡಲು, ಹೂಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಅಂತ್ಯ ಸಂಸ್ಕಾರಕ್ಕೆ ಹೋದವರು ಅಂತ್ಯಕ್ರಿಯೆ ಮುಗಿಸಿ ವಿಶ್ರಾಂತಿ ಪಡೆದು ಬರುವ ವ್ಯವಸ್ಥೆಯನ್ನು ಪಂಚಾಯಿತಿ ಮಟ್ಟದಲ್ಲಿ ಮಾಡಲಾಗಿದೆ. ಆದರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತವರು ಕ್ಷೇತ್ರ ಹಾಗೂ ತಾಲ್ಲೂಕು ಕೇಂದ್ರದಲ್ಲಿ ವ್ಯವಸ್ಥಿತ ಸ್ಮಶಾನ ಇಲ್ಲದಿರುವುದು ಬೇಸರದ ಸಂಗತಿ.
–ವೆಂಕಟೇಶ್, ನಾಗರಿಕ, ಕನಕಪುರ
ದೇಗುಲ ಮಠದ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸುವುದು ನರಕ ಯಾತನೆ. ಒಳಗೆ ಹೋಗಲು ರಸ್ತೆ ವ್ಯವಸ್ಥೆ ಇಲ್ಲ. ದೂಳಿನಿಂದ ಕೂಡಿದೆ.ಸ್ಮಶಾನ ಗಿಡಗಂಟಿಗಳಿಂದ ಆವೃತವಾಗಿದೆ. ಸುತ್ತಲೂ ಕಾಂಪೌಂಡ್ ನಿರ್ಮಿಸಿಲ್ಲ. ಇಂತಹ ದಯನೀಯ ಸ್ಥಿತಿಯಲ್ಲಿರುವ ರುದ್ರಭೂಮಿ ಅಭಿವೃದ್ಧಿಪಡಿಸುವಂತೆ ನಗರಸಭೆಗೆ ಮನವಿ ಸಲ್ಲಿಸಿದರೂ ಗಮನಹರಿಸುತ್ತಿಲ್ಲ. ಸ್ಮಶಾನಕ್ಕಾಗಿ ಹೋರಾಟ ಮಾಡಬೇಕಾದ ಅನಿವಾರ್ಯ ಇದೆ.