ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪು–ಹಳದಿ ಶಾಲು ಹಾಕಿಕೊಂಡವರನ್ನು ಕಂಡರೆ ಭಯ: ಸುದೀಪ್

Last Updated 5 ಮಾರ್ಚ್ 2021, 14:28 IST
ಅಕ್ಷರ ಗಾತ್ರ

ರಾಮನಗರ: ‘ಈಗೀಗ ಯಾರಾದರೂ ಕೆಂಪು–ಹಳದಿ ಶಾಲು ಹಾಕಿಕೊಂಡು ನನ್ನ ಮನೆ ಮುಂದೆ ಬಂದು ನಿಂತರೆ ನನಗೆ ಭಯ–ಗೊಂದಲ ಆಗುತ್ತಿದೆ’ ಎಂದು ನಟ ಸುದೀಪ್‌ ನಗೆ ಚಟಾಕಿ ಹಾರಿಸಿದರು.

ದುಬೈನ ಬುರ್ಜ್‌ ಖಲೀಫಾ ಕಟ್ಟಡದಲ್ಲಿ ಕನ್ನಡ ಬಾವುಟ ಪ್ರದರ್ಶನ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳಿಂದ ಬಿಡದಿಯ ಇನೋವೇಟಿವ್‌ ಫಿಲ್ಮ್‌ ಸಿಟಿಯಲ್ಲಿ ಶುಕ್ರವಾರ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ‘ಈ ಶಾಲು ಹಾಕಿಕೊಂಡವರನ್ನು ಕಂಡರೆ ಅವರು ನಮ್ಮನ್ನು ಹೊಗಳಲು ಬಂದಿದ್ದಾರ ಇಲ್ಲ ಹೊಡೆಯಲು ಬಂದಿದ್ದಾರ ಎನ್ನುವ ಗೊಂದಲ ಆಗುತ್ತದೆ’ ಎಂದರು.

ಜಗ್ಗೇಶ್‌ರಿಗೆ ದರ್ಶನ್‌ ಅಭಿಮಾನಿಗಳಿಂದ ಘೇರಾವ್ ಕುರಿತು ಮಾತನಾಡಿದ ಸುದೀಪ್‌ ‘ಒಬ್ಬ ಕಲಾವಿದನಿಗೆ ನಾಡಿನಾದ್ಯಂತ ಸಾವಿರಾರು ಅಭಿಮಾನಿಗಳು ಇದ್ದಾರೆ. ನೀವು ಆ ಕಲಾವಿದನಿಗೆ ಬಯ್ಯಲು ಬಂದಾಗ ಅವನೊಬ್ಬನೇ ಇರಬಹುದು. ಯಾವುದೇ ವ್ಯಕ್ತಿಯಿಂದ ತಪ್ಪಾದರೂ ಅದರ ವಿರುದ್ಧ ಭಾವೋದ್ವೇಗಕ್ಕೆ ಒಳಗಾಗಿ ಪ್ರತಿಕ್ರಿಯಿಸಬೇಡಿ. ಸಮಾಧಾನವಾಗಿ ಕುಳಿತು ಆ ಬಗ್ಗೆ ವಿಚಾರ ಮಾಡಿ ನಂತರ ತೀರ್ಮಾನಕ್ಕೆ ಬನ್ನಿ’ ಎಂದು ಸಂಘಟನೆಗಳ ಸದಸ್ಯರಿಗೆ ಸಲಹೆ ನೀಡಿದರು.

ಗೊಂದಲ ಬಗೆಹರಿಸಿಕೊಳ್ಳಿ: ನಾಡಿನ ಕನ್ನಡಪರ ಸಂಘಟನೆಗಳಲ್ಲೇ ಗೊಂದಲ ಇದೆ. ಮೊದಲು ನೀವು ಕುಳಿತುಕೊಂಡು ಮಾತನಾಡಿ ನಿಮ್ಮಲ್ಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದು ಸುದೀಪ್‌ ಕಿವಿಮಾತು ಹೇಳಿದರು.

‘ಕನ್ನಡ ಮಾತನಾಡಲು ಬಂದರೆ ಬಯ್ಯುತ್ತೀರಾ. ಬರದೇ ಹೋದರೂ ಬಯ್ಯುತ್ತೀರಾ. ಅನ್ಯಭಾಷಿಕರು ನಮ್ಮಲ್ಲಿ ಬಂದು ಕನ್ನಡ ಮಾತನಾಡುತ್ತಾರೆ ಎಂದರೆ ಅವರನ್ನು ಹಂಗಿಸಬಾರದು. ಅವರು ಯಾವ ರೀತಿ ಮಾತನಾಡುತ್ತಾರೆ ಎಂಬುದು ಮುಖ್ಯ ಅಲ್ಲ. ಅವರ ಪ್ರಯತ್ನವನ್ನು ಶ್ಲಾಘಿಸಬೇಕು. ಎಲ್ಲ ಭಾಷೆ ಬಗ್ಗೆ ನಮಗೆ ಅಭಿಮಾನ ಇರಬೇಕು’ ಎಂದರು.

"ಕನ್ನಡವನ್ನು ಉಳಿಸಬೇಕು ಎಂದು ಯಾರೂ ಹೇಳಬಾರದು. ಏಕೆಂದರೆ ನಮ್ಮ ಭಾಷೆಯನ್ನು ಕಿತ್ತುಕೊಳ್ಳುವ ತಾಕತ್ತು ಯಾರಿಗೂ ಇಲ್ಲ. ಹೀಗಾಗಿ ನಾವೆಲ್ಲ ಕನ್ನಡ ಬೆಳೆಸೋಣ ಎನ್ನಬೇಕು. ಭಾಷೆ ಬರದವರಿಗೆ ಕನ್ನಡ ಕಲಿಸುವ ಪ್ರಯತ್ನ ಆಗಬೇಕು’ ಎಂದು ಆಶಿಸಿದರು.

ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಈ ಸಂದರ್ಭ ಸುದೀಪ್‌ರನ್ನು ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT