ಮಾಗಡಿ: ತಾಲ್ಲೂಕಿನಲ್ಲಿ ನಿರಂತರ ವಿದ್ಯುತ್ ಕಡಿತವಾಗುತ್ತಿದ್ದು ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಾಲ್ಲೂಕು ರೈತ ಸಂಘದ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ಲೋಕೇಶ್ ಮಾತನಾಡಿ, ವಿದ್ಯುತ್ ತೊಂದರೆಯ ಬಗ್ಗೆ ಬೆಸ್ಕಾಂ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆದರೂ ಅಧಿಕಾರಿಗಳು ಈ ವಿಷಯದ ಕುರಿತು ಮಾತನಾಡಲು ಸಭೆಗೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ನೀಡುತ್ತಿರುವ ವಿದ್ಯುತ್ನಲ್ಲಿ ರೈತರಿಗೆ 180 ವೋಲ್ಟೇಜ್ ಮಾತ್ರ ಸಿಗುತ್ತಿದೆ. ಇಷ್ಟು ಕಡಿಮೆ ಪ್ರಮಾಣದ ವಿದ್ಯುತ್ನಿಂದ 800 ಅಡಿ ಕೊಳವೆಬಾವಿಯಿಂದ ನೀರು ತೆಗೆಯಲು ಕಷ್ಟವಾಗುತ್ತಿದೆ. ಪ್ರತಿನಿತ್ಯವೂ ಇದೇ ತೊಂದರೆಯಿಂದಾಗಿ ಮೋಟಾರ್ಗಳು ಹಾಳಾಗುತ್ತಿವೆ. ಇದಕ್ಕೆ ಅಧಿಕಾರಿಗಳೇ ಹೊಣೆ ಎಂದು ದೂರಿದರು.
ಬೆಳಗಿನ ಜಾವ 5ರಿಂದ 6 ಗಂಟೆಯವರೆಗೂ ಹಾಗೂ ಸಂಜೆ 5 ರಿಂದ ರಾತ್ರಿ 11ರವರೆಗೂ ವಿದ್ಯುತ್ ನೀಡಬೇಕೆಂದು ಸೂಚಿಸಲಾಗಿದೆ. ಅಲ್ಲದೇ, ಕೆಇಬಿ ಅಡಿಯಲ್ಲಿ ಬರುವ 15 ಕಿಲೋಮೀಟರ್ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.