ಭದ್ರಾವತಿ: ‘ಅಧರ್ಮದಿಂದ ಸಂಪಾದಿಸಿದ್ದು ಕಾಲಾನಂತರದಲ್ಲಿ ಅಧಃಪತನ ಹೊಂದುತ್ತದೆ. ಎಲ್ಲರೂ ಭಕ್ತಿ, ಸನ್ಮಾರ್ಗದಿಂದ ನಡೆಯಬೇಕು ಎಂದು ಶೃಂಗೇರಿ ಶಂಕರಮಠದ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
ಇಲ್ಲಿನ ಶೃಂಗೇರಿ ಶಂಕರಮಠಕ್ಕೆ ಭಾನುವಾರ ಆಗಮಿಸಿದ ಅವರು ಆಶೀರ್ವಚನ ನೀಡಿದರು. ಶ್ರೀರಾಮಚಂದ್ರನ ಸದ್ಗುಣ ಸಂಪನ್ನತೆ ಎಲ್ಲರಲ್ಲೂ ಬೆಳೆಯಬೇಕು ಎಂದು ಹೇಳಿದರು.
ಶಂಕರ ಭಗವಾತ್ಪಾದರು ರಾಷ್ಟ್ರದ ನಾಲ್ಕು ದಿಕ್ಕಿನಲ್ಲಿ ನಾಲ್ಕು ಮಠಗಳನ್ನು ನೆಲೆ ನಿಲ್ಲುವಂತೆ ಮಾಡುವ ಮೂಲಕ ಭಕ್ತಿ, ಸನ್ಮಾರ್ಗದ ಚಿಂತನೆ ತುಂಬುವ ಜತೆಗೆ ಅದ್ವೈತ ಸಿದ್ಧಾಂತವನ್ನು ಸಾರುವ ಮೂಲಕ ಮನುಕುಲದ ಏಳ್ಗೆಗೆ ಮೇಲ್ಪಂಕ್ತಿ ಹಾಕಿಕೊಟ್ಟರು ಎಂದರು.
‘ಶೃಂಗೇರಿ ಪೀಠ ವಿಶಿಷ್ಟ ಗುರುಪರಂಪರೆ ಮೂಲಕ ಬೆಳೆದು ಬಂದಿದ್ದು, ಹಿರಿಯ ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗುತ್ತಿದ್ದು, ಭಕ್ತ ಸಮೂಹವೂ ಸಹ ವಿವಿಧ ಕೈಂಕರ್ಯ ನಡೆಸಿಕೊಂಡು ಬರುತ್ತಿರುವುದು ಮೆಚ್ಚುವ ಸಂಗತಿ’ ಎಂದು ಹೇಳಿದರು.
ಆಶೀರ್ವಚನಕ್ಕೂ ಮುನ್ನ ಸ್ವಾಮೀಜಿಯನ್ನು ಶಂಕರ ವೃತ್ತದಿಂದ ಮೆರವಣಿಗೆಯಲ್ಲಿ ಕರೆ ತರಲಾಯಿತು. ಧರ್ಮಾಧಿಕಾರಿ ಕೆ.ಆರ್.ಸುಬ್ಬರಾವ್ ಅವರು ಸ್ವಾಮೀಜಿ ಅವರನ್ನು ಮಠಕ್ಕೆ ಬರಮಾಡಿಕೊಂಡರು.
ಶಾಸಕ ಎಂ.ಜೆ.ಅಪ್ಪಾಜಿ, ಮಾಜಿ ಶಾಸಕ ಬಿ.ಕೆ.ಸಂಗಮೇಶ್ವರ, ಬಿಜೆಪಿ ಮುಖಂಡ ಜಿ.ಧರ್ಮಪ್ರಸಾದ್, ನಗರಸಭಾ ಸದಸ್ಯ ಶಿವರಾಜ್ , ಭಜನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.