ತೀರ್ಥಹಳ್ಳಿ: ದೇಶದ ಬಡಜನರಿಗೆ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ. ಸ್ವಾತಂತ್ರ್ಯ ಶ್ರೀಮಂತರು, ಉಳ್ಳವರ ಪಾಲಾಗುತ್ತಿದೆ. ಕಾನೂನು ಪಾಠ ಮಾಡುವ ಅರಣ್ಯ ಇಲಾಖೆಯ ವರ್ತನೆ ಅತಿರೇಕವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಜನರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಆರೋಪಿಸಿದರು.
ಒತ್ತುವರಿ ತೆರವು ಹೆಸರಿನಲ್ಲಿ ಬಡಕುಟುಂಬಗಳ ಮೇಲೆ ಆಗುತ್ತಿರುವ ದೌರ್ಜನ್ಯ ಖಂಡಿಸಿ ಸಿಂಗನಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗಲತ್ತಿ ಗ್ರಾಮದ ಕೊಪ್ಪಸರದಿಂದ ಮಂಡಗದ್ದೆ ವಲಯ ಅರಣ್ಯಾಧಿಕಾರಿ ಕಚೇರಿವರೆಗೆ ಹಮ್ಮಿಕೊಂಡಿದ್ದ 13 ಕಿ.ಮೀ. ಪಾದಯಾತ್ರೆಯಲ್ಲಿ ಮಾತನಾಡಿದರು.
ತಾಲ್ಲೂಕಿನಾದ್ಯಂತ ತುಂಡು ಭೂಮಿ ಹೊಂದಿರುವ ಬಡ ರೈತರನ್ನು ಬೀದಿಗೆ ಬೀಳುವಂತೆ ಮಾಡಿದೆ. ಇಲಾಖೆ ಮಾಡುತ್ತಿರುವ ಕ್ರೌರ್ಯದಿಂದಾಗಿ ಸಣ್ಣ ಹಿಡುವಳಿದಾರರ ಜೀವನ ಸಂಕಷ್ಟದಲ್ಲಿದೆ. ಕಳ್ಳರು, ಅಪ್ರಾಮಾಣಿಕರನ್ನು ಊರು ಬಿಡಿಸುವ ಕೆಲಸವನ್ನು ಜನರು ಮಾಡಬೇಕು. ಅರಣ್ಯ ಇಲಾಖೆಗೆ ಹೆದರಿ ಜೀವನ ನಡೆಸಬೇಕಾದ ಪರಿಸ್ಥಿತಿ ಬಂದಿದೆ ಎಂದರು.
ಗಾಂಧೀಜಿ ಹುಟ್ಟಿದ ದೇಶದಲ್ಲಿ ದರ್ಪದಲ್ಲಿರುವ ಅಧಿಕಾರಿಗಳು ಸ್ವಾತಂತ್ರ್ಯ ಪೂರ್ವದ ಬ್ರಿಟಿಷರಂತೆ ವರ್ತಿಸುತ್ತಿದ್ದಾರೆ. ಬಿಜೆಪಿ ಸೂಚನೆಯಂತೆ ಕಾಂಗ್ರೆಸ್ ಮುಖಂಡರ ಮೇಲೆ ಕೇಸು ದಾಖಲಿಸುವ ಪೊಲೀಸ್ ಇಲಾಖೆಗೆ ಬುದ್ಧಿ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ, ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಮುಡುಬ ರಾಘವೇಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಮೇಲಿನಕೊಪ್ಪ ಹರೀಶ್, ಟಿ.ಟಿ. ತಿಮ್ಮಪ್ಪ, ಕೆರೆಹಳ್ಳಿ ರಾಮಪ್ಪ ಮಾತನಾಡಿದರು.