ಶಿವಮೊಗ್ಗ: ‘ಎಸ್.ಬಂಗಾರಪ್ಪ ಫೌಂಡೇಷನ್, ಬಂಗಾರಪ್ಪ ವಿಚಾರ ವೇದಿಕೆ ಹಾಗೂ ಅಭಿಮಾನಿ ಬಳಗದ ಸಂಯುಕ್ತಾಶ್ರಯದಲ್ಲಿ ಡಿ.26ರಂದು ಸಂಜೆ 4ಕ್ಕೆ ಸೊರಬದ ಬಂಗಾರ ಧಾಮದಲ್ಲಿ ಎಸ್.ಬಂಗಾರಪ್ಪ ಸವಿ ನೆನಪು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಬಂಗಾರಪ್ಪ ವಿಚಾರ ವೇದಿಕೆ ಮುಖ್ಯಸ್ಥ ನಾಗರಾಜ್ ಮೂರ್ತಿ ತಿಳಿಸಿದರು.
‘ಬಂಗಾರಪ್ಪ, ಸಮಾಜವಾದಿ ಚಿಂತನೆ ಮೂಲಕ ರಾಜ್ಯ ರಾಜಕಾರಣಕ್ಕೆ ಸ್ಪಷ್ಟ ದಿಕ್ಕು ತೋರಿಸಿದ್ದರು. ಬಡವರ ಪಾಲಿಗೆ ಆಶಾಕಿರಣವಾಗಿದ್ದರು. ಶಾಂತವೇರಿ ಗೋಪಾಲಗೌಡರ ಹೋರಾಟದ ಕುಲುಮೆಯಲ್ಲಿ ಅರಳಿದ್ದರು. ಅವರ 12ನೇ ವರ್ಷದ ಪುಣ್ಯ ಸ್ಮರಣೆಯ ನೆನಪಿಗೆ ಸೊರಬದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.
‘ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸುವರು. ಸಚಿವ ಎಚ್.ಕೆ.ಪಾಟೀಲ, ಮಾಜಿ ಸಚಿವ ಅರವಿಂದ ಲಿಂಬಾವಳಿ ಉಪಸ್ಥಿತರಿ ರುವರು. ಗೀತಾ ಶಿವರಾಜ್ಕುಮಾರ್ ಅಭಿನಂದನಾ ನುಡಿಗಳನ್ನಾಡುವರು. ಅನೀಶ್ ವಿದ್ಯಾಶಂಕರ್ ಸಂಗೀತ ಕಾರ್ಯಕ್ರಮ ಇರುತ್ತದೆ’ ಎಂದು ಹೇಳಿದರು.