ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಕುಂಟುತ್ತಾ ಸಾಗಿದ ಕಾಲೇಜು ವಿದ್ಯಾರ್ಥಿಗಳ ಲಸಿಕಾ ಅಭಿಯಾನ

ಬೇಡಿಕೆಯಷ್ಟು ಪೂರೈಕೆಯಾಗದ ಲಸಿಕೆ, ಪ್ರಕ್ರಿಯೆಗೆ ಹಿನ್ನಡೆ
Last Updated 12 ಜುಲೈ 2021, 4:04 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಲ್ಲಿ ನಡೆಯುತ್ತಿರುವ ಲಸಿಕೆ ಪ್ರಕ್ರಿಯೆ ‘ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬಂತಾಗಿದೆ. ಲಸಿಕೆ ತೆಗೆದುಕೊಳ್ಳುವವರ ಸಂಖ್ಯೆ ದೊಡ್ಡದಿದೆ. ಆದರೆ, ಪೂರೈಕೆಯಾಗುವ ಲಸಿಕೆ ಕಡಿಮೆ. ಆದ್ಯತಾ ವಲಯದವರ ಜತೆಗೆ ಕಾಲೇಜು ವಿದ್ಯಾರ್ಥಿಗಳಿಗೂ ಲಸಿಕೆ ನೀಡುವಂತೆ ಸರ್ಕಾರ ನಿರ್ದೇಶನ ನೀಡಿರುವುದು ಮತ್ತಷ್ಟು ಬಿಕ್ಕಟ್ಟು ಸೃಷ್ಟಿಸಿದೆ. ಒಬ್ಬರಿಗೆ ಲಸಿಕೆ ಹಾಕಿದರೆ, ಮತ್ತೊಂದು ವರ್ಗದ ಜನರಿಗೆ ಕೊರತೆ ಬೀಳುತ್ತಿದೆ.

ಪದವಿ, ಸ್ನಾತಕೋತ್ತರ ಪದವಿ ತರಗತಿಗಳನ್ನು ಆರಂಭಿಸುವ ಮುನ್ನ ಎಲ್ಲ ವಿದ್ಯಾರ್ಥಿಗಳಿಗೂ ಲಸಿಕೆ ಹಾಕಿಸುವಂತೆ ಸರ್ಕಾರ ನಿರ್ದೇಶನ ನೀಡಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು, ಪದವಿ ಕಾಲೇಜುಗಳ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿ ಸೇರಿ ಒಟ್ಟು 70 ಸಾವಿರ ಇದ್ದಾರೆ. ಅವರೆಲ್ಲರಿಗೂ ಜುಲೈ 7ರೊಳಗೆ ಲಸಿಕೆ ಹಾಕಿಸಬೇಕು ಎಂದು ಸರ್ಕಾರ ಆದೇಶಿಸಿತ್ತು. ಮತ್ತೆ ಜುಲೈ 15ರವರೆಗೆ ಕಾಲಾವಕಾಶ ನೀಡಲಾಗಿದೆ. ಆದರೂ, ಆ ಅವಧಿಯಲ್ಲೂ ಲಸಿಕೆ ಕಾರ್ಯ ಮುಗಿಸುವುದು ಆರೋಗ್ಯ ಇಲಾಖೆಗೆ ದೊಡ್ಡ ಸವಾಲಾಗಿದೆ.

ಪ್ರತಿದಿನ ಲಭ್ಯವಾಗುವ ಲಸಿಕೆಯಲ್ಲೇ ಹಂಚಿಕೆ ಮಾಡಿ ವಿದ್ಯಾರ್ಥಿಗಳಿಗೂ ಲಸಿಕೆ ಹಾಕಲು ಆರೋಗ್ಯ ಇಲಾಖೆ ಶ್ರಮಿಸುತ್ತಿದೆ. ಈಗಾಗಲೇ ಕೆಲವು ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳಲ್ಲಿ ಲಸಿಕೆ ಕಾರ್ಯಕ್ರಮ ಪ್ರಾರಂಭಗೊಂಡಿವೆ. ಜತೆಗೆ ವಿದ್ಯಾರ್ಥಿಗಳು ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ಹಾಕಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ಲಸಿಕಾ ಕೇಂದ್ರಗಳ ಬಳಿ ಪದವಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಬೇಗ ಬಂದವರಿಗೆ ಮಾತ್ರ ಲಸಿಕೆ ಎಂಬ ಸ್ಥಿತಿ ಜಿಲ್ಲೆಯಲ್ಲಿದೆ. ಪ್ರತಿದಿನ ಹಂಚಿಕೆಯಾಗಿರುವ ಲಸಿಕೆಗಿಂತಲೂ ಮೂರು, ನಾಲ್ಕು ಪಟ್ಟು ಜನರು ಕೇಂದ್ರಗಳ ಮುಂದೆ ಜಮಾಯಿಸಿರುತ್ತಾರೆ. ಒಂದೆರಡು ಗಂಟೆಗಳಲ್ಲಿ ಲಸಿಕೆ ಮುಗಿದ ತಕ್ಷಣ ‘ಲಸಿಕೆ ಲಭ್ಯವಿಲ್ಲ’ ಎಂಬ ಫಲಕಗಳು ಕಾಣಿಸುತ್ತವೆ.

‘ಜಿಲ್ಲೆಗೆ ವಾರದಲ್ಲಿ ಮೂರರಿಂದ ನಾಲ್ಕು ದಿನಕ್ಕೊಮ್ಮೆ ಲಸಿಕೆ ಬರುತ್ತಿದೆ. ಒಮ್ಮೆ 10 ಸಾವಿರದಿಂದ 12 ಸಾವಿರದಷ್ಟು ಲಸಿಕೆಗಳು ಬರುತ್ತಿವೆ. ತಾಲ್ಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಉಪ ಕೇಂದ್ರಗಳು ಸೇರಿ ಜಿಲ್ಲೆಯಲ್ಲಿ 106 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಲಸಿಕೆಯನ್ನು ಎಲ್ಲ ಕೇಂದ್ರಗಳಿಗೂ ಸಮನಾಗಿ ಹಂಚಿಕೆ ಮಾಡಲಾಗುತ್ತಿದೆ. 100 ಲಸಿಕೆಗಳು ಪೂರೈಕೆಯಾದ ಕೇಂದ್ರಕ್ಕೆ ಒಂದೇ ದಿನ 300– 400 ಜನರು ಬಂದರೆ ಲಸಿಕೆ ಸಿಗುವುದಿಲ್ಲ’ ಎನ್ನುತ್ತಾರೆ ಡಿಎಚ್‌ಒ ಡಾ.ರಾಜೇಶ್‌ ಸುರಗೀಹಳ್ಳಿ.

ಲಸಿಕೆ ಹಾಕಿಸುವುದು ಸವಾಲಿನ ಕೆಲಸ: ನಗರದಲ್ಲಿ ಸರ್ಕಾರದ ನಿರ್ದೇಶನದಂತೆ ಕಾಲೇಜುಗಳ ಮುಖ್ಯಸ್ಥರು ಆರೋಗ್ಯ ಇಲಾಖೆಯ ನೆರವಿನೊಂದಿಗೆ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸುತ್ತಿದ್ದಾರೆ. ಲಸಿಕೆ ಹಾಕಿಸಿಕೊಳ್ಳದ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸುವುದು ಕಾಲೇಜು ಸಿಬ್ಬಂದಿಗೆ ಸವಾಲಿನ ಕೆಲಸವಾಗಿದೆ.

ಆಯಾ ಕಾಲೇಜುಗಳಲ್ಲಿ ಲಸಿಕಾ ಅಭಿಯಾನ ನಡೆಯುತ್ತಿದೆ. ಆಯಾ ತಾಲ್ಲೂಕುಗಳ ಆರೋಗ್ಯಾಧಿಕಾರಿಗಳೇ ಕಾಲೇಜುಗಳಿಗೆ ಲಸಿಕೆ ಹಂಚಿಕೆ ಮಾಡುತ್ತಿದ್ದಾರೆ. ಕಾಲೇಜುಗಳ ಪ್ರಾಂಶುಪಾಲರ ವಾಟ್ಸ್‌ಆ್ಯಪ್‌ ಗ್ರೂಪ್‌ ರಚನೆ ಮಾಡಿ, ಲಸಿಕೆಯ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ನಗರದ ಭಾಗದಲ್ಲಿ ಹೆಚ್ಚು ವಿದ್ಯಾರ್ಥಿಗಳಿರುವ ಕಾರಣ ನಗರದ ಭಾಗಕ್ಕೆ ಹೆಚ್ಚು ಲಸಿಕೆ ನೀಡಲಾಗುತ್ತಿದೆ. ತಾಲ್ಲೂಕು ಭಾಗದ ಕಾಲೇಜು ಸಿಬ್ಬಂದಿ ತಮ್ಮ ಕಾಲೇಜಿಗೆ ಲಸಿಕೆ ತರಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

‘ಆರೋಗ್ಯ ಇಲಾಖೆ ಅಧಿಕಾರಿಗಳು ಕಡಿಮೆ ಇದ್ದರೆ ನೂರು, ಇನ್ನೂರು ಲಸಿಕೆ ಕೊಟ್ಟು ಸುಮ್ಮನಾಗುತ್ತಾರೆ. ಬೇಡಿಕೆ ಇರುವಷ್ಟು ಲಸಿಕೆ ಕೊಡುತ್ತಿಲ್ಲ. ಲಸಿಕೆ ಲಭ್ಯ ಇದ್ದಾಗ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಲಸಿಕೆ ಹಾಕಿಸಬೇಕು. ಹೆಚ್ಚಿನ ವಿದ್ಯಾರ್ಥಿಗಳು ಹೊರಗಡೆಯೇ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ ಪದವಿ ಕಾಲೇಜೊಂದರ ಪ್ರಾಂಶುಪಾಲರು.

***

ಲಸಿಕೆ ಹಾಕಿಸಲು ಶ್ರಮ

‘ಬಾಪೂಜಿ ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ 2,617 ವಿದ್ಯಾರ್ಥಿಗಳು ಇದ್ದಾರೆ. 523 ವಿದ್ಯಾರ್ಥಿಗಳು ಇನ್ನೂ ಲಸಿಕೆ ಪಡೆದುಕೊಂಡಿಲ್ಲ. ಕಾಲೇಜು ಪ್ರಾರಂಭವಾಗದ ಕಾರಣ ಎಲ್ಲ ವಿದ್ಯಾರ್ಥಿಗಳಿಗೂ ಏಕಕಾಲದಲ್ಲಿ ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ. ಕೆಲವರು ಹೊರಗಡೆ ಲಸಿಕೆ ಹಾಕಿಸಿಕೊಂಡಿದ್ದಾರೆ. ಲಸಿಕೆ ಹಾಕಿಸಿಕೊಳ್ಳದ ವಿದ್ಯಾರ್ಥಿಗಳಿಗೆ ವಾಟ್ಸ್‌ಆ್ಯಪ್‌ ಮೆಸೇಜ್‌ ಕಳುಹಿಸಲಾಗುತ್ತಿದೆ’ ಎನ್ನುತ್ತಾರೆ ಶಿವಮೊಗ್ಗ ಬಾಪೂಜಿ ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಆರ್.ಧನಂಜಯ.

***

ವಾರದೊಳಗೆ ಎಲ್ಲ ವಿದ್ಯಾರ್ಥಿಗಳಿಗೂ ಲಸಿಕೆ

ಶಿವಮೊಗ್ಗ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿ ಸೇರಿ ಒಟ್ಟು 69,500 ಸಾವಿರ ಇದ್ದಾರೆ. ಅವರಲ್ಲಿ 40 ಸಾವಿರ ಮಂದಿಗೆ ಲಸಿಕೆ ಹಾಕಲಾಗಿದೆ. ಉಳಿದಿರುವವರಿಗೆ ಜುಲೈ 15ರ ಒಳಗೆ ಲಸಿಕೆ ಹಾಕಿಸಲು ಕ್ರಮ ವಹಿಸಲಾಗುವುದು. ವಿದ್ಯಾರ್ಥಿಗಳು ತಾವಿರುವ ಸ್ಥಳದ ಸಮೀಪದ ಲಸಿಕಾ ಕೇಂದ್ರಕ್ಕೆ ಹೋಗಿ ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್‌ ಸುರಗೀಹಳ್ಳಿ ತಿಳಿಸಿದರು.

***

ಅಭಿಯಾನಕ್ಕೆ ಅಡ್ಡಿಯಾದ ಲಸಿಕೆ ಕೊರತೆ

ಕಾಲೇಜು ಆರಂಭಿಸಲು ಸಿದ್ಧತೆ ಮಾಡಿಕೊಳ್ಳಬೇಕೆಂದು ಉನ್ನತ ಶಿಕ್ಷಣ ಇಲಾಖೆ ಸೂಚಿಸಿದೆ. ಆದರೆ, ಇಂತಹುದೇ ನಿರ್ದಿಷ್ಟ ದಿನಾಂಕದಲ್ಲಿ ಆರಂಭಿಸುವುದಾಗಿ ತಿಳಿಸಿಲ್ಲ. ಹೀಗಿದ್ದರೂ ಕೆಲ ಶಿಕ್ಷಣ ಸಂಸ್ಥೆಗಳು ಲಸಿಕೆ ಪಡೆದ ವಿದ್ಯಾರ್ಥಿಗಳ ಮಾಹಿತಿ ಕಲೆಹಾಕುತ್ತಿವೆ. ಯಾರು ಲಸಿಕೆ ಪಡೆದಿಲ್ಲವೋ ಅವರಿಗಾಗಿ
ಲಸಿಕೆ ಹಾಕುವ ವ್ಯವಸ್ಥೆಗೆ ಮುಂದಾಗಿವೆ.

ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಸರ್ಕಾರಿ ಹಾಗೂ ಖಾಸಗಿ ಸೇರಿ ಒಟ್ಟು 105 ಪದವಿ ಕಾಲೇಜುಗಳಿವೆ. ಎಲ್ಲ ಕಾಲೇಜುಗಳಿಂದ 90 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ ಈವರೆಗೆ ಶೇ 55ರಿಂದ 60ರಷ್ಟು ವಿದ್ಯಾರ್ಥಿಗಳು ಲಸಿಕೆ ಪಡೆದುಕೊಂಡಿದ್ದಾರೆ. ಕುವೆಂಪು ವಿಶ್ವವಿದ್ಯಾಲಯ ಆವರಣದಲ್ಲೇ 4 ಸಾವಿರ ವಿದ್ಯಾರ್ಥಿಗಳಿದ್ದಾರೆ. ಲಸಿಕೆ ಲಭ್ಯತೆಯಂತೆ ಈವರೆಗೆ 2 ಸಾವಿರದಷ್ಟು ಮಂದಿ ಲಸಿಕೆ ಪಡೆದುಕೊಂಡಿದ್ದಾರೆ.

‘ವಿದ್ಯಾರ್ಥಿಗಳು ಲಸಿಕೆ ಹಾಕಿಸಲು ಜುಲೈ 7ರವರೆಗೆ ಅವಕಾಶ ನೀಡಲಾಗಿತ್ತು. ಆದರೆ, ಲಸಿಕೆ ಕೊರತೆಯಿಂದ ಜುಲೈ 15ರವರೆಗೆ ವಿಸ್ತರಿಸಲಾಗಿದೆ. ನಿಗದಿತ ಅವಧಿಯಲ್ಲಿ ಮುಗಿಸುವುದು ಅಸಾಧ್ಯವಾಗಿದೆ. ಲಸಿಕೆ ಲಭ್ಯವಿದ್ದರೆ ಅವಧಿಯೊಳಗೆ ಮುಗಿಸಬಹುದು. ಕೊರತೆ ಇರುವುದರಿಂದ ಹೆಚ್ಚು ದಿನಗಳು ಬೇಕು’ ಎನ್ನುತ್ತಾರೆ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ.

***

ಭದ್ರಾವತಿಯಲ್ಲಿ 5,438 ವಿದ್ಯಾರ್ಥಿಗಳಿಗೆ ಲಸಿಕೆ

ಕೆ.ಎನ್.ಶ್ರೀಹರ್ಷ

ಭದ್ರಾವತಿ: ಕೋವಿಡ್‌ಲಸಿಕೆ ಪಡೆಯಲು ನಾಗರಿಕರು ಇನ್ನಿಲ್ಲದ ಕಸರತ್ತು ನಡೆಸಿದ್ದರೆ, ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವ ಕೆಲಸ ಕಾಲೇಜು ಕೇಂದ್ರಗಳಲ್ಲಿ ಯಶಸ್ವಿಯಾಗಿ ನಡೆದಿದೆ.

ತಾಲ್ಲೂಕಿನಲ್ಲಿ ಇಲ್ಲಿಯವರೆಗೆ 78,858 ಮಂದಿಗೆ ಲಸಿಕೆ ಹಾಕಲಾಗಿದೆ. ಅವರಲ್ಲಿ ಎರಡು ಲಸಿಕೆಯನ್ನು ಪಡೆದವರ ಸಂಖ್ಯೆ 15,970 ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಆರೋಗ್ಯ ಹಾಗೂ ಇತರ ಇಲಾಖೆ ನೌಕರರಲ್ಲಿ 2,752, ಪ್ರಥಮ ಹಂತದ ನೌಕರರಲ್ಲಿ 3,394 ಮಂದಿ ಲಸಿಕೆ ಪಡೆದಿದ್ದಾರೆ. ಒಟ್ಟಾರೆ ಲಸಿಕೆ ಪ್ರಮಾಣದಲ್ಲಿ 18ರಿಂದ 44 ವಯೋಮಾನದವರಲ್ಲಿ 9,887, 45ರಿಂದ 59 ವಯೋಮಾನ ಹೊಂದಿರುವ 32,894 ಹಾಗೂ 60 ವರ್ಷ ಮೇಲ್ಪಟ್ಟ 29,491 ಮಂದಿಗೆ ಲಸಿಕೆ ಹಾಕಲಾಗಿದೆ. 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಲ್ಲಿ 5,438 ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಅಶೋಕ್ ಮಾಹಿತಿ ನೀಡಿದರು.

ವಾರದಿಂದ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದ ಪ್ರೇರಣಾ ಟ್ರಸ್ಟ್ ಹಾಗೂ ಇನ್ನಿತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಲಸಿಕಾ ಅಭಿಯಾನದಲ್ಲಿ ಸುಮಾರು 1,500 ವಿದ್ಯಾರ್ಥಿಗಳಿಗೆ ಪ್ರಯೋಜನ ಸಿಕ್ಕಿದೆ. ಬಹುತೇಕ ಎಲ್ಲ ಪದವಿ ಕಾಲೇಜು, ಐಟಿಐ ಹಾಗೂ ತಾಂತ್ರಿಕ ವಿಭಾಗದ ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವ ಶಿಬಿರಗಳು ಆಯಾ ಕಾಲೇಜುಗಳಲ್ಲಿ ನಡೆದದ್ದು ವಿಶೇಷ.

ಲಸಿಕೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ನಿತ್ಯ ಸಾಲುಗಟ್ಟಿ ನಿಲ್ಲುವ ಜನರ ಸಂಖ್ಯೆ ಹೆಚ್ಚಿದೆ. ಲಸಿಕೆಯ ಸಂಖ್ಯೆಗೆ ತಕ್ಕಂತೆ ಟೋಕನ್ ವಿತರಿಸುವ ಕೆಲಸ ಇಲಾಖೆ ಕಡೆಯಿಂದ ನಡೆದಿದೆ. ಅದರಲ್ಲೂ ಎರಡನೇ ಡೋಸ್ ಪಡೆಯುವ ನಾಗರಿಕರು ತಮಗೆ ಬಂದಿರುವ ಮೆಸೇಜ್ ಹಿಡಿದು ಓಡಾಡುವ ಸ್ಥಿತಿ ಕೇಂದ್ರಗಳ ಮುಂದೆ ಕಂಡುಬರುತ್ತಿದೆ.

‘ಕಾಲೇಜು ಕೇಂದ್ರದಲ್ಲಿ ಆರಂಭಿಸಿದ ಲಸಿಕೆ ಕಾರ್ಯ ಉತ್ತಮವಾಗಿ ನಡೆದಿದೆ. ಸರಾಸರಿ ಶೇ 50ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಲಸಿಕೆ ಭಾಗ್ಯ ಸಿಕ್ಕಿದ್ದು, ಇನ್ನುಳಿದವರ ಲಸಿಕೆ ಹಾಕುವ ಕೆಲಸಕ್ಕೆ ಬೇಡಿಕೆ ಸಲ್ಲಿಸುವ ಕೆಲಸ ಮಾಡಿದ್ದೇವೆ’ ಎನ್ನುತ್ತಾರೆ ಕಾಲೇಜೊಂದರ ಪ್ರಾಂಶುಪಾಲರು.

ಲಸಿಕೆ ಸರಬರಾಜಿನ ವಿಳಂಬದ ಕಾರಣ ಪ್ರತಿದಿನ ಅದನ್ನು ವಿತರಿಸುವ ಕೆಲಸ ಸಾಧ್ಯವಾಗಿಲ್ಲ. ದಿನ ಬಿಟ್ಟು ದಿನ ಇಲ್ಲ ಎರಡು ಮೂರು ದಿನಕ್ಕೊಮ್ಮೆ ಇದಕ್ಕೆ ಅವಕಾಶ ನೀಡುತ್ತಿದೆ. ಇದು ಬಂದ ಸಂಖ್ಯೆಗೆ ತಕ್ಕಂತೆ ವಿತರಣೆ ಕಾರ್ಯ ನಡೆದಿದೆ.

***

ಸಾಗರದ ಕಾಲೇಜುಗಳಲ್ಲಿ ಲಸಿಕಾ ಅಭಿಯಾನಕ್ಕಿಲ್ಲ ತೊಂದರೆ

ಎಂ.ರಾಘವೇಂದ್ರ

ಸಾಗರ: ಸರ್ಕಾರದಿಂದ ಪೂರೈಕೆಯಾದ ಕೋವಿಡ್ ತಡೆ ಲಸಿಕೆಯ ಜತೆಗೆ ಸಂಸದಬಿ.ವೈ.ರಾಘವೇಂದ್ರ ಅವರು ಕೆಲವು ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ ತಾಲ್ಲೂಕಿಗೆ 3,236ಡೋಸ್ ಲಸಿಕೆ ಪೂರೈಸಿದ ಕಾರಣ ತಾಲ್ಲೂಕಿನ ಪದವಿ ಕಾಲೇಜುಗಳಲ್ಲಿ ಲಸಿಕೆ ಅಭಿಯಾನ ಬಿರುಸಿನಿಂದ ಸಾಗಿದೆ.

ಜೂನ್ 28ರಿಂದ ತಾಲ್ಲೂಕಿನ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗೆಲಸಿಕೆ ನೀಡುವ ಕಾರ್ಯ ನಡೆಯುತ್ತಿದೆ. ತಾಲ್ಲೂಕಿನ ಅತಿ ದೊಡ್ಡ ಕಾಲೇಜು ಎಂಬ ಹೆಗ್ಗಳಿಕೆಗೆಪಾತ್ರವಾಗಿರುವ ಇಂದಿರಾಗಾಂಧಿ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ 2,773ವಿದ್ಯಾರ್ಥಿನಿಯರು ಓದುತ್ತಿದ್ದು, ಜುಲೈ 7ರವರೆಗೆ 2,242 ವಿದ್ಯಾರ್ಥಿನಿಯರಿಗೆ ಲಸಿಕೆ ನೀಡಲಾಗಿದೆ.

ನಗರದ ಹೊರವಲಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 873ವಿದ್ಯಾರ್ಥಿಗಳು ಇದ್ದು, 627 ವಿದ್ಯಾರ್ಥಿಗಳು ಲಸಿಕೆ ಸೌಲಭ್ಯ ಪಡೆದಿದ್ದಾರೆ. ಎಲ್‌ಬಿ ಮತ್ತು ಎಸ್‌ಬಿಎಸ್‌ ಕಾಲೇಜಿನಲ್ಲಿ ಸ್ನಾತಕೋತ್ತರ ವಿಭಾಗದವರೂ ಸೇರಿ 1,130 ವಿದ್ಯಾರ್ಥಿಗಳುವ್ಯಾಸಂಗ ಮಾಡುತ್ತಿದ್ದು, ಈವರೆಗೆ 890 ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಂಡಿದ್ದಾರೆ.

ನಗರದ ಸಂಜಯ್ ಮೆಮೋರಿಯಲ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 440 ವಿದ್ಯಾರ್ಥಿಗಳಿದ್ದು, 329ವಿದ್ಯಾರ್ಥಿಗಳಿಗೆ ಲಸಿಕೆ ಲಭ್ಯವಾಗಿದೆ. ತಾಲ್ಲೂಕಿನ ಕೇಡಲಸರ ಗ್ರಾಮದ ಕಾಕಲ್ ಪ್ರಥಮ ದರ್ಜೆಕಾಲೇಜಿನಲ್ಲಿ 157 ವಿದ್ಯಾರ್ಥಿಗಳಿದ್ದು, 147 ವಿದ್ಯಾರ್ಥಿಗಳು ಲಸಿಕೆ ಪಡೆದಿದ್ದಾರೆ.

ಕಾಲೇಜುಗಳಲ್ಲಿ ಲಸಿಕೆ ಅಭಿಯಾನ ಆರಂಭವಾಗುವ ಮುನ್ನವೇ 341 ವಿದ್ಯಾರ್ಥಿಗಳು ಲಸಿಕೆಪಡೆದಿದ್ದಾರೆ. 18ರಿಂದ 45 ವರ್ಷದೊಳಗಿನವರಿಗೆ ಲಸಿಕೆ ನೀಡುವ ಮುನ್ನವೇಈ ವಿದ್ಯಾರ್ಥಿಗಳು ಲಸಿಕೆ ಪಡೆದಿರುವುದು ಲಸಿಕಾ ಕೇಂದ್ರದಲ್ಲಿ ನಿಯಮಗಳ ಪಾಲನೆಯಾಗುತ್ತಿಲ್ಲಎನ್ನುವ ದೂರಿಗೆ ಪುಷ್ಟಿ ದೊರಕಿದಂತಾಗಿದೆ.

ಲಸಿಕಾ ಕೇಂದ್ರಗಳಲ್ಲಿ 18ರಿಂದ 45 ವರ್ಷದೊಳಗಿನವರಿಗೆ ಲಸಿಕೆ ಪಡೆಯಲು ಸರ್ಕಾರದ ವಿವಿಧಮಾರ್ಗಸೂಚಿಗಳನ್ನು ಪಾಲಿಸಬೇಕಾಗಿದೆ. ಈ ಕಾರಣಕ್ಕೆ ಕಾಲೇಜು ವಿದ್ಯಾರ್ಥಿಗಳಲ್ಲದವರಿಗೆ ಲಸಿಕೆ ಸುಲಭವಾಗಿ ದೊರಕುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT