ಹೊಸನಗರ: ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಸರ್ಕಾರದ ವಿರುದ್ಧ ಮಾರ್ಚ್ 15ರಂದು 20 ಕಿ.ಮೀ. ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ವಿದ್ಯುತ್ ಬಳಕೆದಾರರ ಹೋರಾಟ ಸಮಿತಿಯ ವಾಟಗೋಡು ಸುರೇಶ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ತಾಲ್ಲೂಕಿನ ಬಟ್ಟೆಮಲ್ಲಪ್ಪದಿಂದ ಪಾದಯಾತ್ರೆ ಆರಂಭವಾಗಲಿದ್ದು, ಮಾರುತಿಪುರ, ಕಚ್ಚಿಗೆಬೈಲು, ಬ್ರಹ್ಮೇಶ್ವರ, ಮಾವಿನಕೊಪ್ಪ ವೃತ್ತ ಮಾರ್ಗವಾಗಿ ತಹಶೀಲ್ದಾರ್ ಕಚೇರಿಯ ತನಕ ನಡೆಯಲಿದೆ ಎಂದರು.
ಈ ಪಾದಯಾತ್ರೆಯಲ್ಲಿ ರೈತರು, ರೈತ ಕಾರ್ಮಿಕರು, ಸ್ವ–ಸಹಾಯ ಸಂಘದ ಸದಸ್ಯರು, ವಿದ್ಯುತ್ ಬಳಕೆದಾರರು ಹಾಗೂ ವಿದ್ಯುತ್ ಸಮಸ್ಯೆಯಿಂದ ಬಳಲುತ್ತಿರುವ ಗ್ರಾಮೀಣ ಭಾಗದ ಜನರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಮೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿ ಯಿಂದ ಗಂಟೆಗೆ ಹಲವು ಬಾರಿ ವಿದ್ಯುತ್ ಸಂಪರ್ಕ ಕಡಿತವಾಗುತ್ತಿದೆ. ಪದೇ ಪದೇ ವೋಲ್ಟೇಜ್ ಸಮಸ್ಯೆಯಿಂದ ರೈತರ ಪಂಪ್ಸೆಟ್ ಸೇರಿ ವಿದ್ಯುತ್ ಉಪಕರಣಗಳು ಸುಟ್ಟುಹೋಗುತ್ತಿವೆ ಎಂದು ದೂರಿದರು.
ಪಾದಯಾತ್ರೆ ಯಲ್ಲಿ ಈ ಭಾಗದ ಹರಿದ್ರಾವತಿ, ಪುರಪ್ಪಮನೆ, ಹರತಾಳು, ಮಾರುತಿಪುರ ಗ್ರಾಮ ಪಂಚಾಯಿತಿಯ ಗ್ರಾಮಸ್ಥರು ಪಾಲ್ಗೊಳ್ಳುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಮಾರುತಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಿದಂಬರ್ ಹೂವಿನಕೋಣೆ, ಹರತಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲ್ಲಿ ಯೋಗೇಂದ್ರ, ಹರಿದ್ರಾವತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಇದ್ದರು.