ಮಕ್ಕಳಿಗೆ ಐಸ್ಕ್ರೀಮ್ ಜತೆ ಪುಸ್ತಕ ಕೊಡಿ

ಸಾಗರ: ಪೋಷಕರು ಮಕ್ಕಳಿಗೆ ಐಸ್ ಕ್ರೀಮ್, ಪಾನಿಪೂರಿ ಕೊಡಿಸುವ ಜತೆಗೆ ಪುಸ್ತಕವೊಂದನ್ನು ಕೊಡಿಸಿ ಎಂದು ಸಾಹಿತಿ ನಾ.ಡಿಸೋಜ ಸಲಹೆ ನೀಡಿದರು.
ಇಲ್ಲಿನ ಸೇವಾ ಸಾಗರ ಶಾಲೆಯ ಅಜಿತ್ ಸಭಾಭವನದಲ್ಲಿ ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಶನಿವಾರ ಏರ್ಪಡಿಸಿದ್ದ 8ನೇ ತಾಲ್ಲೂಕು ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಪುಸ್ತಕ ಕೊಡಿಸುವ ಜೊತೆಗೆ ಆ ಪುಸ್ತಕದ ಬಗ್ಗೆ ನಾಲ್ಕು ಒಳ್ಳೆಯ ಮಾತುಗಳನ್ನು ಹೇಳುವ ಮೂಲಕ ಓದಿಗೆ ಅವರನ್ನು ಪ್ರೇರೇಪಿಸಬೇಕು. ಬದುಕಿನ ಹಲವು ಸತ್ಯಗಳನ್ನು ಸಾಹಿತ್ಯ ಅನಾವರಣಗೊಳಿಸುತ್ತದೆ ಎಂಬುದನ್ನು ಮಕ್ಕಳಿಗೆ ತಿಳಿಸಬೇಕಿದೆ ಎಂದರು.
ಮರಾಠಿಯಲ್ಲಿ ಮಕ್ಕಳ ಸಾಹಿತ್ಯಕ್ಕೆ ಹೆಚ್ಚು ಮನ್ನಣೆ ದೊರಕುತ್ತಿದೆ. ಮಕ್ಕಳ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಅಲ್ಲಿ ಗ್ರಂಥಾಲಯಗಳಿವೆ. ನಮ್ಮ ರಾಜ್ಯದಲ್ಲೂ ಮಕ್ಕಳ ಸಾಹಿತ್ಯಕ್ಕೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
ಆಶಯ ಭಾಷಣ ಮಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್, ‘ಪೋಷಕರು ಮಕ್ಕಳಿಗೆ ಸೌಲಭ್ಯಗಳನ್ನು ಒದಗಿಸುವ ಜೊತೆಗೆ ಎಲ್ಲ ರೀತಿಯ ಜ್ಞಾನದ ಕಿಂಡಿಗಳನ್ನು ತೆರೆದಿಡಬೇಕು. ಸೌಲಭ್ಯಗಳಿಂದ ಮಕ್ಕಳು ಮೈಮರೆಯದಂತೆ ಎಚ್ಚರವಹಿಸಬೇಕು’ ಎಂದು ಕಿವಿಮಾತು ಹೇಳಿದರು.
ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷೆ ಸ್ಫೂರ್ತಿ ಆನಂದಪುರ, ಪ್ರಮುಖರಾದ ಅಶ್ವಿನಿಕುಮಾರ್, ವಿ.ಗಣೇಶ್, ಜಿ.ಪರಮೇಶ್ವರಪ್ಪ, ಡಿ.ಗಣಪತಪ್ಪ, ವಿ.ಟಿ. ಸ್ವಾಮಿ, ಪರಮೇಶ್ವರ ಕರೂರು, ಜಿ. ನಾಗೇಶ್, ಸತ್ಯನಾರಾಯಣ ಸಿರಿವಂತೆ, ಗುಡ್ಡಪ್ಪ ಜೋಗಿ, ಬಿ.ಡಿ.ರವಿಕುಮಾರ್, ಕೃಷ್ಣಮೂರ್ತಿ ಇದ್ದರು. ಮಾನ್ವಿ ಕರೂರು ನಿರೂಪಿಸಿದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.