ಹೊಸನಗರ: ‘ದೇಶದಲ್ಲಿಂದು ಮಹಿಳಾ ಶಕ್ತಿ ಸಮರ್ಥವಾಗಿದೆ. ಮಹಿಳೆಯರಿಗೆ ರಾಜಕೀಯವಾಗಿ ಮೀಸಲಾತಿ ನೀಡಲು ಮಹತ್ವದ ಯೋಜನೆಯನ್ನು ಬಿಜೆಪಿ ರೂಪಿಸಿದೆ. ಯೋಜನೆ ಜಾರಿಗೆ ಬಂದು ಅತೀ ಹೆಚ್ಚು ಮಹಿಳಾ ಸಂಸದರು ಆಯ್ಕೆ ಆಗಲಿದ್ದಾರೆ’ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.
ತಾಲ್ಲೂಕಿನ ಮಾರುತೀಪುರದಲ್ಲಿ ಬುಧವಾರ ನಡೆದ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಬಿಜೆಪಿ ಸರ್ಕಾರ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಇದು ಕೇವಲ ಚುನಾವಣೆ ಅಲ್ಲ. ಇದು ಭವಿಷ್ಯದ ಯುವಜನತೆಯನ್ನು ರೂಪಿಸುವ ಚುನಾವಣೆ ಆಗಿದೆ’ ಎಂದರು.
ಉಪಾಧ್ಯಕ್ಷ ಹರತಾಳು ಹಾಲಪ್ಪ ಮಾತನಾಡಿ, ‘ಮಹಿಳೆಯರಿಗೆ ಸ್ಥಾನಮಾನ ಕೊಟ್ಟಿದ್ದು ಬಿಜೆಪಿ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ದಿನಗಳಲ್ಲಿ ಮಹಿಳೆಯರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಮಹಿಳಾ ಸಮೂಹಕ್ಕೆ ಬಲ ತುಂಬಿದ್ದರು. ಜನಪರ ಅಭಿವೃದ್ಧಿ ಕೆಲಸ ಮಾಡಿರುವ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಿ ಪಕ್ಷವನ್ನು ಬಲಪಡಿಸಬೇಕಾಗಿದೆ ಎಂದರು.
ತಾಲ್ಲೂಕು ಮಹಿಳಾ ಮೋರ್ಚಾದ ಅಧ್ಯಕ್ಷೆ ಆಶಾ ರವೀಂದ್ರ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷ ಸುಬ್ರಹ್ಮಣ್ಯ ಮತ್ತಿಮನೆ, ಪಕ್ಷದ ಪ್ರಮುಖರಾದ ಗಾಯತ್ರಿ ಮಲ್ಲಪ್ಪ, ರಾಜನಂದಿನಿ, ಎ.ಟಿ. ನಾಗರತ್ನ, ಗುಲಾಬಿ ಮರಿಯಪ್ಪ, ಕೃಷ್ಣ ವೇಣಿ, ನಾಗರತ್ನ ದೇವರಾಜ್ ಮತ್ತಿತರರು ಇದ್ದರು.