ಶಿವಮೊಗ್ಗ: ವಿನೋಬನಗರ ಕಲ್ಲಹಳ್ಳಿಯ ಮನೆಯಲ್ಲಿ ಮಂಗಳವಾರ ಮಾಜಿ ಶಾಸಕ ಎಸ್. ಮಧು ಬಂಗಾರಪ್ಪ ಹುಟ್ಟುಹಬ್ಬ ಆಚರಿಸಿಕೊಂಡರು.
100 ಕೆ.ಜಿ. ತೂಕದ ಗುಲಾಬಿಹಾರ ಹಾಕಿ, ‘ಮಧು ಅಣ್ಣಾ’ ಎಂಬ ಉದ್ದನೆಯ ಕೇಕ್ ಕತ್ತರಿಸಿ ಎಸ್. ಬಂಗಾರಪ್ಪ, ಮಧು ಬಂಗಾರಪ್ಪ ಅಭಿಮಾನಿಗಳು ಸಂಭ್ರಮಿಸಿದರು. ಹುಟ್ಟುಹಬ್ಬದ ನಿಮಿತ್ತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಬಂದ ಎಲ್ಲರಿಗೂ ಗುಲಾಬಿ ಗಿಡ ಹಂಚಲಾಯಿತು. ಬಡಮಕ್ಕಳಿಗೆ ನೋಟ್ಬುಕ್ ವಿತರಿಸಲಾಯಿತು. ಸಂಭ್ರಮದಲ್ಲಿ ಭಾರಿ ಸಂಖ್ಯೆಯ ಕಾಂಗ್ರೆಸ್ ಮುಖಂಡರು, ಬೆರಳೆಣಿಕೆಯ ಜೆಡಿಎಸ್ ಸದಸ್ಯರು ಹಾಜರಿದ್ದರು.
ನಂತರ ಸುದ್ದಿಗಾರರ ಜತೆ ಮಾತನಾಡಿದ ಮಧು ಬಂಗಾರಪ್ಪ, ‘ಜೆಡಿಎಸ್ ಸೇರಿ ಒಂದು ದಶಕ ಪೂರ್ಣಗೊಂಡಿದೆ. ಪಕ್ಷದ ವರಿಷ್ಠರಾದ ಎಚ್.ಡಿ. ದೇವೇಗೌಡ, ಕುಮಾರಸ್ವಾಮಿ ಸಾಕಷ್ಟು ಅವಕಾಶ ನೀಡಿದ್ದಾರೆ. ಮನೆ ಮಗನಂತೆ ನೋಡಿಕೊಂಡಿದ್ದಾರೆ’ ಎಂದು ಸ್ಮರಿಸಿದರು.
‘ಜೆಡಿಎಸ್ನಲ್ಲಿ ಕೆಲವು ತಪ್ಪುಗಳು ಆದ ಪರಿಣಾಮ ಮನಸ್ಸಿಗೆ ನೋವಾಗಿದೆ. ಶೀಘ್ರದಲ್ಲೇ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವೆ. ಲೋಕಸಭಾ ಚುನಾವಣೆಯ ಸಮಯದಲ್ಲಿ ಎಲ್ಲರೂ ಪ್ರೀತಿಯಿಂದ ದುಡಿದಿದ್ದಾರೆ. ಹಾಗಾಗಿ, ಎಲ್ಲ ಪಕ್ಷದವರೂ ಸೇರಿದ್ದಾರೆ’ ಎಂದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಮುಖಂಡರಾದ ವಿಜಯಕುಮಾರ್, ವೇದಾ, ಕಲಗೋಡು ರತ್ನಾಕರ್, ಎನ್. ರಮೇಶ್, ಜಿ.ಡಿ. ಮಂಜುನಾಥ್, ಎಸ್.ಕೆ. ಶಿವಾನಂದ್, ಎಸ್.ಪಿ. ದಿನೇಶ್, ಶ್ರೀಧರ್ ಹುಲ್ತಿಕೊಪ್ಪ, ದಿನಬಂಧು ರಮೇಶ್, ಫಾಲಾಕ್ಷಿ, ಸುರೇಶ್ ಶೆಟ್ಟಿ, ಸುರೇಶ್ ಕೆ.ಬಾಳೆಗುಂಡಿ ಇದ್ದರು.