ಶಿವಮೊಗ್ಗ: ನಗರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಮಂಗಳವಾರ ಸಂಜೆ ಆರ್ಭಟಿಸಿದ ಮಳೆ ಹಲವೆಡೆ ಅವಾಂತರ ಸೃಷ್ಟಿಸಿತು.
ಬಸವನಗುಡಿ ಐದನೇ ತಿರುವಿನಲ್ಲಿ ಬಾಕ್ಸ್ ಚರಂಡಿ ಕಟ್ಟಿಕೊಂಡು ಮನೆಗಳ ಒಳಗೆ ನೀರು ನುಗ್ಗಲು ಆರಂಭಿಸಿದೆ. ಎನ್.ಟಿ ರಸ್ತೆ ನಾಗರಹಳ್ಳಿ ಶೋರೂಮ್ ಬಳಿ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು, ಮತ್ತೆ ಪಾದಚಾರಿಗಳಿಗೆ ತೊಂದರೆ ಉಂಟಾಗಿದೆ.
ಅಶೋಕ ನಗರದ ಮೂರನೇ ತಿರುವಿನ ಮನೆಗಳಿಗೆ ನೀರು ನುಗ್ಗಿದೆ. ಜಯನಗರ ಮೂರನೇ ತಿರುವಿನಲ್ಲಿ ಯುಜಿಡಿ ನೀರು ಉಕ್ಕಿ ಹರಿಯುತ್ತಿದೆ. ಈ ಹಿಂದೆ ಜಯನಗರದಲ್ಲಿ ಯುಜಿಡಿಯ ಹೊಲಸುಗಳೆಲ್ಲ ಹೊರಗೆ ಬಂದು ರಸ್ತೆಯೆಲ್ಲಾ ಗಲೀಜಾಗಿತ್ತು. ಅದರ ಮೇಲೆ ವಾಹನ ಓಡಾಡುವಂತಾಗಿತ್ತು.
ಹೊಸಮನೆಯಲ್ಲಿಯೂ ಸ್ಮಾರ್ಟ್ ಸಿಟಿ ಕಾಮಗಾರಿಯಿಂದಾಗಿ ಹೊಸಮನೆ ಬಡಾವಣೆಯ ರಾಜಕಾಲುವೆ ಪಕ್ಕ ಚೌಡೇಶ್ವರಿ ಕಾಲೊನಿ ಅಕ್ಷರಶಃ ದ್ವೀಪದಂತಾಗಿದೆ. ಸುಮಾರು 150 ಮನೆಗಳಿಗೆ ನೀರು ನುಗ್ಗಿದೆ. ಅದರಂತೆ ಬಾಪೂಜಿ ನಗರದಲ್ಲೂ ರಸ್ತೆಯ ಮೇಲೆ ನೀರು ನಿಂತಿದೆ.