ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಯೋಗ ಗುರು ಶ್ರೀಕಂಠಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

Last Updated 1 ನವೆಂಬರ್ 2021, 5:55 IST
ಅಕ್ಷರ ಗಾತ್ರ

ಶಿವಮೊಗ್ಗ: ಯೋಗ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಯೋಗ ಗುರು ಬಾ.ಮಾ. ಶ್ರೀಕಂಠ ಅವರು ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶಿವಮೊಗ್ಗದವರೇ ಆದ ಶ್ರೀಕಂಠ ಅವರು ನಗರದ ಬಿ.ಬಿ. ಸ್ಟ್ರೀಟ್‌ನಲ್ಲಿ ವಾಸವಿದ್ದಾರೆ. ಆರ್‌ಎಸ್‌ಎಸ್‌ ಕಾರ್ಯಕರ್ತರಾಗಿರುವ ಅವರು ಅವಿವಾಹಿತರು.

ಸುಮಾರು 42 ವರ್ಷಗಳಿಂದ ಯೋಗ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ನಗರದಲ್ಲಿರುವ 38 ಯೋಗ ಕೇಂದ್ರಗಳಲ್ಲಿ ಅನೇಕ ಯುವಕ-ಯುವತಿಯರಿಗೆ, ಮಾತೆಯರಿಗೆ ಮಕ್ಕಳು ಹಾಗೂ ಹಿರಿಯರಿಗೆ ಯೋಗದಲ್ಲಿ ಸಾಧನೆ ಮಾಡುವಂತೆ ಅವರು ಪ್ರೇರಣೆ ನೀಡಿದ್ದಾರೆ.

1980ರಿಂದ ಯೋಗ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಅವರು, ಅನೇಕ ಯೋಗ ಕೇಂದ್ರಗಳಲ್ಲಿ ಯೋಗ ಶಿಕ್ಷಣ ನೀಡುತ್ತಿದ್ದು, ಎಂದೂ ತಮ್ಮ ಸೇವೆಗೆ ಸಂಬಳವನ್ನು ಅಪೇಕ್ಷೆಪಟ್ಟಿಲ್ಲ. 80ರ ಇಳಿ ವಯಸ್ಸಿನಲ್ಲೂ ಯೋಗಾಭ್ಯಾಸ ಮಾಡುತ್ತಾ ಇತರರಿಗೂ ಯೋಗದ ಮಹತ್ವ ತಿಳಿಸುವುದು ಅನೇಕ ವರ್ಷಗಳಿಂದ ಅವರು ಮುಂದುವರಿಸಿರುವ ಕಾಯಕ. ಅವರು ನೀಡುವ ಯೋಗ ತರಬೇತಿಯಿಂದ ಹಲವರು ಯೋಗ ಶಿಕ್ಷಕರಾಗಿ ರೂಪುಗೊಂಡಿದ್ದಾರೆ.

ಅವರ ಯೋಗ ಕ್ಷೇತ್ರದ ಗಣನೀಯ ಸೇವೆಗೆ ರವಿಶಂಕರ್‌ ಗುರೂಜಿ ಅವರಿಂದ ‘ಯೋಗಶ್ರೀ’ ಪ್ರಶಸ್ತಿ, ಬೆಂಗಳೂರಿನ ಅಜಿತ ಯೋಗ ಕೇಂದ್ರದಿಂದ ‘ಯೋಗ ಸನ್ಮಾನ್‌’, ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ‘ಯೋಗ ಗುರು’ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಅರಸಿ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT