ಶಿರಾ: ನಗರಸಭೆ ಸದಸ್ಯ ರಂಗರಾಜು ಅವರ ಮೇಲೆ ಕಲ್ಲುಕೋಟೆ ನಿವಾಸಿಗಳಾದ ರತನ್ ಸಿಂಗ್, ಕೃಷ್ಣಸಿಂಗ್ ಮತ್ತು ಮಹೇಶ್ ಸಿಂಗ್ ಎಂಬುವರು ಬುಧವಾರ ಹಲ್ಲೆ ನಡೆಸಿದ್ದಾರೆ.
ನಗರಸಭೆ ವ್ಯಾಪ್ತಿಯ ಕಲ್ಲುಕೋಟೆಯಲ್ಲಿ ನಗರಸಭೆಗೆ ಸೇರಿದ ಕೊಳವೆ ಬಾವಿಯಿಂದ ಅಕ್ರಮವಾಗಿ ತಮ್ಮ ಜಮೀನಿನಲ್ಲಿದ್ದ ನರ್ಸರಿಗೆ ನೀರಿನ ಸಂಪರ್ಕ ಪಡೆದಿದ್ದು, ಹಲವು ಬಾರಿ ನಗರಸಭೆ ಸಿಬ್ಬಂದಿ ಸಂಪರ್ಕ ಕಡಿತ ಮಾಡಿದ್ದರು. ಆದರೂ ಪದೇ ಪದೇ ಅಕ್ರಮವಾಗಿ ಸಂಪರ್ಕ ಪಡೆಯುತ್ತಿದ್ದರು. ಬುಧವಾರ ನಗರಸಭೆ ಪೌರಾಯುಕ್ತ ರುದ್ರೇಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ನೀರಿನ ಸಂಪರ್ಕ ಕಡಿತಗೊಳಿಸಿದ್ದರು.
ನೀರಿನ ಸಂಪರ್ಕ ಕಡಿತಗೊಳಿಸಿದ ನಂತರ ಜಮೀನಿನ ಮಾಲೀಕರಾದ ರತನ್ ಸಿಂಗ್, ಕೃಷ್ಣಸಿಂಗ್, ಮಹೇಶ್ ಸಿಂಗ್ ಮತ್ತು ನಗರಸಭೆ ಸದಸ್ಯ ರಂಗರಾಜು ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಮಯದಲ್ಲಿ ರಂಗರಾಜು ಅವರನ್ನು ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದಾರೆ. ರಂಗರಾಜು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.