ತುಮಕೂರು: ಕೊರೊನಾ ತಡೆಯ ಕಟ್ಟುನಿಟ್ಟಿನ ಮಾರ್ಗಸೂಚಿಗಳ ನಡುವೆ ಜಿಲ್ಲೆಯಲ್ಲಿ ಶನಿವಾರ ಬಕ್ರೀದ್ ಆಚರಣೆ ಸರಳವಾಗಿ ನಡೆಯಿತು.
ಮುಸ್ಲಿಮರು ಮನೆಗಳಲ್ಲಿ ಸಡಗರ ಮನೆ ಮಾಡಿತ್ತು. ಈ ಹಿಂದಿನ ವರ್ಷಗಳಂತೆ ಪ್ರಾರ್ಥನೆ ಸಲ್ಲಿಸಲು ಮಸೀದಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಲಿಲ್ಲ. ಹೆಚ್ಚಿನ ಜನರು ಬಂದರೂ ಒಮ್ಮೆ 50 ಜನರ ತಂಡ ಪ್ರಾರ್ಥನೆ ಸಲ್ಲಿಸಬೇಕು ಎಂದು ಜಿಲ್ಲಾಡಳಿತ ಸೂಚಿಸಿದ ಹಿನ್ನೆಲೆಯಲ್ಲಿ ಕೆಲವು ಕಡೆಗಳಲ್ಲಿ ತಂಡ ತಂಡಗಳಾಗಿ ಪ್ರಾರ್ಥನೆ ಸಲ್ಲಿಸಿದರು.
ಮನೆಗಳಲ್ಲಿ ಮಕ್ಕಳು ಹೊಸ ಬಟ್ಟೆಗಳನ್ನು ತೊಟ್ಟು ಸಂಭ್ರಮಿಸಿದರು. ನಾನಾ ಬಗೆಯ ಖಾದ್ಯಗಳನ್ನು ತಯಾರಿಸಿ ಸವಿದರು. ಬಹಿರಂಗ ಆಚರಣೆಗಳು ಕಡಿಮೆಯಾಗಿದ್ದು ಮನೆಗಳಿಗೆ ಆಚರಣೆಗಳು ಸೀಮಿತವಾಗಿದ್ದವು. ಮಸೀದಿಗೆ ಬಂದಿದ್ದ ಬಹುತೇಕ ಪರಸ್ಪರ ಆಲಿಂಗನಕ್ಕೆ ಮುಂದಾಗದೆ ಶುಭಾಶಯವಿನಿಮಯ ಮಾಡಿಕೊಂಡರು.
ಬಾರ್ಲೈನ್ ರಸ್ತೆಯಲ್ಲಿರುವ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಮಾಜಿ ಶಾಸಕ ಷಫಿ ಅಹಮದ್, ‘ಕೊರೊನಾ ತಡೆಗೆ ಸರ್ಕಾರ ಸೂಚಿಸಿರುವ ಮಾರ್ಗಸೂಚಿ ಅನ್ವಯ ನಾವು ಹಬ್ಬವನ್ನು ಮಾಡುತ್ತಿದ್ದೇವೆ. ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದಾಗ ಮಾಸ್ಕ್ ಧರಿಸಿ ಅಂತರ ಕಾಯ್ದುಕೊಳ್ಳುತ್ತಿದ್ದೇವೆ’ ಎಂದರು.
ಕೊರೊನಾ ಸೋಂಕು ತೊಲಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇವೆ. ಜಿಲ್ಲೆಯಾದ್ಯಂತ ಶಾಂತಿಯುತವಾಗಿ ಹಬ್ಬ ಆಚರಿಸಲಾಗಿದೆ ಎಂದು ಹೇಳಿದರು.
ಯಾರಬ್ ನಗರ, ಪಿ.ಎಚ್.ಕಾಲೊನಿ, ಎನ್.ಆರ್.ಕಾಲೊನಿ ಹೀಗೆ ವಿವಿಧ ಬಡಾವಣೆಗಳಲ್ಲಿರುವ ಮಸೀದಿಗಳಲ್ಲಿಯೂ ಪ್ರಾರ್ಥನೆಗಳು ನಡೆದವು.