ತಿಪಟೂರು: ರೈತರಿಂದ ಬೆಸ್ಕಾಂ ಅಧಿಕಾರಿಯೊಬ್ಬರು ಹಣ ಪಡೆಯುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಾಲ್ಲೂಕಿನ ನೊಣವಿನಕೆರೆಯ ಬೆಸ್ಕಾಂ ಕಚೇರಿಯ ನೊಣವಿನಕೆರೆ ಶಾಖಾಧಿಕಾರಿ ರವೀಂದ್ರ ಕಚೇರಿಯ ಮುಂಭಾಗ ಟೇಬಲ್ ಹಾಕಿಕೊಂಡು ರೈತನಿಂದ ಹಣವನ್ನು ತನ್ನ ಟೆಬಲ್ನ ಬಾಕ್ಸ್ ಒಳಗೆ ಹಾಕಿಸಿಕೊಳ್ಳುವ ವಿಡಿಯೋ ವೈರಲ್ ಆಗಿದೆ.
ಅವರು ಯಾವಾಗಲೂ ಕಚೇರಿಯಿಂದ ಹೊರಭಾಗದಲ್ಲಿಯೇ ಟೇಬಲ್ ಹಾಕಿಕೊಂಡು ಕೂರುತ್ತಿದ್ದು, ರೈತರ ಸಮಸ್ಯೆಯನ್ನು ಬಗೆ ಹರಿಸುವ ಬದಲು ರೈತರಿಂದ ಈ ರೀತಿಯಲ್ಲಿ ಹಣ ಪಡೆಯುತ್ತಿರುವುದು ನಿಜಕ್ಕೂ ಅಮಾನವೀಯ ಸಂಗತಿ ಎಂದು ಸಾರ್ವಜನಿಕರು ದೂರಿದ್ದಾರೆ.
‘ವಿಡಿಯೊ ಗಮನಿಸಿದ್ದೇವೆ. ಹಣ ನೀಡಿದವರು ಬಂದು ದೂರು ನೀಡಿಲ್ಲ. ಜೊತೆಗೆ ವಿಡಿಯೊದಲ್ಲಿ ನೋಟು ಕಾಣುತ್ತಿಲ್ಲ. ಈ ಪ್ರಕರಣವನ್ನು ಸಾಬೀತು ಮಾಡಲು ಸಾಧ್ಯವಾಗುವುದಿಲ್ಲ. ಸ್ಥಳೀಯ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇನೆ’ ಎಂದು ತಿಪಟೂರು ಶಾಖೆ ಎಇಇ ಜಯಣ್ಣ ಪ್ರತಿಕ್ರಿಯಿಸಿದರು.