ತುರುವೇಕೆರೆ: ಪಟ್ಟಣದ ಸ್ವಚ್ಛತೆ ಮತ್ತು ಅದರ ಭೌತಿಕ ಸೌಂದರ್ಯವನ್ನು ಕಾಪಾಡುವಲ್ಲಿ ಪೌರ ಕಾರ್ಮಿಕರ ಶ್ರಮ ಶ್ಲಾಘನೀಯ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಶ್ರೀನಾಥ್ ಬಾಬು ಹೇಳಿದರು.
ಪಟ್ಟಣ ಪಂಚಾಯಿತಿಯಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆಯಿಂದ ಬುಧವಾರ ಹಮ್ಮಿಕೊಂಡಿದ್ದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪೌರ ಕಾರ್ಮಿಕರು ಮಾಡುವ ಸ್ವಾಭಿಮಾನದ ಸೇವೆಯನ್ನು ಎಲ್ಲರೂ ಗೌರವಿಸೋಣ. ಅವರು ನಿತ್ಯ ಸೇವಾ ಕಾರ್ಯದಲ್ಲಿ ತೊಡಗದಿದ್ದರೆ ಪಟ್ಟಣದ ಸ್ವಚ್ಛತೆ ಹಾಳಾಗಿ ಅನೈರ್ಮಲ್ಯ ಉಂಟಾಗಿ ಪಟ್ಟಣಿಗರು ಹಲವು ರೋಗ ರುಜಿನಗಳಿಗೆ ತುತ್ತಾಗಬೇಕಾಗುತ್ತದೆ ಎಂದರು.
ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಟಿ.ಸಿ.ಸುನಿಲ್ ಬಾಬು ಮಾತನಾಡಿ, ನಗರದ ಸ್ವಚ್ಛತೆ ಆರೋಗ್ಯವನ್ನು ಕಾಪಾಡುವ ಕೆಲಸ ಮಾಡುವ ಪೌರ ಕಾರ್ಮಿಕರೇ ನಗರದ ಮುಖ್ಯ ಶಕ್ತಿಯಾಗಿದ್ದು ಅಂತವರನ್ನು ಶರಣ ಸಾಹಿತ್ಯ ಪರಿಷತ್ತು ಗುರುತಿಸಿ, ಗೌರವಿಸುವ ಕೆಲಸ ಮಾಡಿದೆ ಎಂದರು.
ಹಿರಿಯ ಪೌರ ಕಾರ್ಮಿಕ ಟಿ.ಡಿ.ರವಿಕುಮಾರ್ ಮತ್ತು ಬಿ.ಆರ್.ಸುಮಲತ ಅವರನ್ನು ಸನ್ಮಾನಿಸಲಾಯಿತು.
ಕದಳಿ ವೇದಿಕೆ ತಾಲ್ಲೂಕು ಅಧ್ಯಕ್ಷೆ ದೇವಮ್ಮಶಂಕರಪ್ಪ, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ರೂಪಶ್ರೀ, ಲಯನ್ಸ್ ಕ್ಲಬ್ ಪದಾಧಿಕಾರಿ ರವಿಕುಮಾರ್, ನಾಗರಾಜ್, ರಾಜಣ್ಣ, ಜ್ಯೋತಿ, ವಿರೂಪಾಕ್ಷ, ಕಾರ್ಮಿಕರ ಮುಖಂಡ ಸುರೇಶ್, ಕೆ.ಆರ್.ಕಾಂತರಾಜು, ಸದಾನಂದ ಇದ್ದರು.