ತುಮಕೂರು: ರಾಜ್ಯದಲ್ಲಿ ಹಿಂದೂಗಳ ಹತ್ಯೆ ತಡೆಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ಮುಖಂಡ ಸೊಗಡು ಶಿವಣ್ಣ ಇಲ್ಲಿ ಗುರುವಾರ ಆರೋಪಿಸಿದರು.
ಮುಸ್ಲಿಂ ಸಂಘಟನೆಗಳು ದೇಶದಲ್ಲಿ ಯುದ್ಧ ಸಾರಿವೆ. ಅಗೋಚರ ಯುದ್ಧ ಆರಂಭವಾಗಿದ್ದು, ದುಷ್ಟ ಶಕ್ತಿಗಳು ಕಾನೂನು ಕೈಗೆ ತೆಗೆದುಕೊಂಡಿವೆ. ಇಂತಹ ಆತಂಕ, ಭಯದ ವಾತಾವರಣ ಸೃಷ್ಟಿಯಾಗಿದ್ದರೂ ತಡೆಯುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ನೇರ ವಾಗ್ದಾಳಿ ನಡೆಸಿದರು.
ಸ್ವಾತಂತ್ರ್ಯದ ನಂತರ ಮುಸ್ಲಿಮರನ್ನು ದೇಶ ಬಿಟ್ಟು ಕಳುಹಿಸಿಲ್ಲ. ಪಾಕಿಸ್ತಾನಕ್ಕೆ ಹೋಗುವಂತೆ ಹೇಳಿಲ್ಲ. ಅವರನ್ನು ದೇಶದಲ್ಲಿ ಗಲ್ಲಿಗೆ ಹಾಕಿಲ್ಲ. ಹೊಂದಿಕೊಂಡು ಹೋಗುವಂತೆ ಹೇಳುತ್ತಿದ್ದರೂ ಹಿಂದೂಗಳನ್ನು ಹತ್ಯೆ ಮಾಡುವ ಮೂಲಕ ಯುದ್ಧ ಮಾಡಲು ಮುಂದಾಗಿದ್ದಾರೆ. ಯಾರ ಜೀವ ತೆಗೆಯುತ್ತಾರೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ದೂರಿದರು.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಬಿಜೆಪಿ ಯುವ ಮೋರ್ಚಾ ಹಾಗೂ ಪಕ್ಷದ ಇತರೆ ಘಟಕಗಳ ಪದಾಧಿಕಾರಿಗಳು ರಾಜೀನಾಮೆ ನೀಡಲು ಮುಂದಾಗಿರುವುದಕ್ಕೆ ಪ್ರತಿಕ್ರಿಯಿಸಿ, ಯಾರೂ ರಾಜೀನಾಮೆ ನೀಡಬಾರದು. ಅದರ ಬದಲು ಬೀದಿಗೆ ಇಳಿದು ಹೋರಾಟ ಮಾಡಬೇಕು. ಆರ್ಎಸ್ಎಸ್ ಮುಖಂಡರು ಮುಂದೆ ನಿಂತು ಹಿಂದೂ ಸಮಾಜದಲ್ಲಿ ಇರುವ ಜಾತಿ ವ್ಯವಸ್ಥೆ ತೊಡೆದು ಹಾಕಬೇಕು. ‘ಹಿಂದೂಗಳು ನಾವೆಲ್ಲ ಒಂದು’ ಎಂಬ ಸ್ಥಿತಿ ನಿರ್ಮಾಣ ಮಾಡಿದರೆ ಮಾತ್ರ ಹಿಂದೂಗಳ ಹತ್ಯೆ ತಡೆಯಲು ಸಾಧ್ಯವಾಗಲಿದೆ. ನಾವು ಕ್ರಾಂತಿಕಾರಿಗಳಾಗಬೇಕೆ? ಶಾಂತಿವಾದಿಗಳಾಗಬೇಕೆ? ಎಂಬ ಬಗ್ಗೆ ಆರ್ಎಸ್ಎಸ್ ನಮಗೆ ಸರಿಯಾಗಿ ಮಾರ್ಗದರ್ಶನ ಮಾಡಬೇಕು ಎಂದು ಹೇಳಿದರು.
ಮುಸ್ಲಿಮರು ಹೊಂದಿರುವ ಪಾಸ್ಪೋರ್ಟ್ ತಪಾಸಣೆಗೆ ಒಳಪಡಿಸಬೇಕು. ಸಾಕಷ್ಟು ಮಂದಿ ನಕಲಿ ಪಾಸ್ಪೋರ್ಟ್ ಹೊಂದಿರುವ ಅನುಮಾನವಿದೆ. ತಪಾಸಣೆ ಮಾಡಿದರೆ ಸಿಕ್ಕಿ ಬೀಳುತ್ತಾರೆ. ರಾಜ್ಯದಲ್ಲಿ ಇರುವ ಮದರಸಾಗಳನ್ನು ಮುಚ್ಚಿಸಬೇಕು ಎಂದು ಒತ್ತಾಯಿಸಿದರು.