ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ರೈತರನ್ನು ಕಾಡುತ್ತಿರುವ ಮಳೆ

Last Updated 19 ನವೆಂಬರ್ 2021, 3:14 IST
ಅಕ್ಷರ ಗಾತ್ರ

ತುಮಕೂರು: ಕಳೆದ ಎರಡು ದಿನಗಳಿಂದ ಬಿಡುವು ನೀಡಿದ್ದ ವರುಣ ಗುರುವಾರ ಮತ್ತೆ ಅಬ್ಬರಿಸಲು ಆರಂಭಿಸಿದೆ. ಬೆಳಿಗ್ಗೆ ಸೋನೆ ಬೀಳಲಾರಂಭಿಸಿದ್ದು, ಮಧ್ಯಾಹ್ನದ ನಂತರ ಬಿರುಸು ಪಡೆದುಕೊಂಡಿದೆ.

ಇಡೀ ದಿನ ಬೀಳುತ್ತಲೇ ಇದ್ದು, ಜನಜೀವನ ಅಸ್ತವ್ಯಸ್ತಗೊಂಡಿದ್ದು, ಬಹುತೇಕ ಚಟುವಟಿಕೆಗಳು ಸ್ತಬ್ಧಗೊಂಡಿ
ದ್ದವು. ಬೆಳಿಗ್ಗೆ ಸಣ್ಣ ಹನಿಗಳ ನಡುವೆಯೇ ಜನರು ತಮ್ಮ ಚಟುವಟಿಕೆಗಳನ್ನು ಆರಂಭಿಸಿದ್ದರು. ಮಧ್ಯಾಹ್ನ 3 ಗಂಟೆ ನಂತರ ಜೋರಾಗಿದ್ದು, ನೆನೆದುಕೊಂಡೇ ತೆರಳುತ್ತಿದ್ದ ದೃಶ್ಯ ಕಂಡು ಬಂತು. ಶಾಲೆ, ಕಾಲೇಜುಗಳಿಗೆ ತೆರಳಿದ್ದ ಮಕ್ಕಳು ಮನೆಗೆ ಮರಳಲು ಪರದಾಡಿದರು. ರಾತ್ರಿ ವೇಳೆಗೆ ಮತ್ತಷ್ಟು ಜೋರಾಗಿ ಸುರಿಯಲಾರಂಭಿಸಿತು.

ಸತತವಾಗಿ ಮಳೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಬೆಳೆ ಹಾನಿ ಸಂಭವಿಸಿದೆ. ರಾಗಿ, ಜೋಳ, ಶೇಂಗಾ ಸೇರಿದಂತೆ ಕೊಯ್ಲಿಗೆ ಬಂದಿದ್ದ ಬೆಳೆಗಳು ಹಾಳಾಗಿವೆ. ಹೊಲ, ಗದ್ದೆಗಳಲ್ಲಿ ನೀರು ನಿಂತಿದ್ದು, ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ರೈತರು ಒದ್ದಾಡುತ್ತಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಾಗಿದೆ.

ಈ ಪ್ರಮಾಣದ ಮಳೆ ಕಂಡು ದಶಕ ಕಳೆದಿತ್ತು. ಈ ಬಾರಿ ಕೆರೆ, ಕಟ್ಟೆಗಳು ಬಹುತೇಕ ಭರ್ತಿಯಾಗಿದ್ದು, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ಸಣ್ಣಪುಟ್ಟ ನದಿಗಳು ಮೈದುಂಬಿಕೊಂಡಿವೆ. ಇಷ್ಟು ದಿನಗಳ ಕಾಲ ಮಳೆ ಬಂದರೆ ಸಾಕು ಎನ್ನುತ್ತಿದ್ದವರು, ಈಗ ಯಾವಾಗ ನಿಲ್ಲುತ್ತದೆ ಎಂದು ಕಾಯುವಂತಾಗಿದೆ. ಅತಿಯಾದ ಮಳೆ ರೈತರನ್ನು ಕಾಡುತ್ತಿದ್ದು, ಸಾಕಪ್ಪ ಸಾಕುಎನ್ನವಂತಾಗಿದೆ.

ಮಳೆ ವಿವರ: ಜಿಲ್ಲೆಯ ವಿವಿಧೆಡೆ ಕಳೆದ 24 ಗಂಟೆಗಳಲ್ಲಿ (ಗುರುವಾರ ಬೆಳಿಗ್ಗೆ ವರೆಗೆ) ಬಿದ್ದ ಮಳೆ ವಿವರ (ಮೀ.ಮೀ).

ತುಮಕೂರು ಊರ್ಡಿಗೆರೆ 5.1, ಬೆಳ್ಳಾವಿ 4.6, ನೆಲಹಾಳ್ 5.3, ಗುಬ್ಬಿ 4, ಹಾಗಲವಾಡಿ 5, ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗ 16.2, ಕೆ.ಎಚ್.ಹಳ್ಳಿ 10.2, ತಿಪಟೂರು 22.1, ನೊಣವಿನಕೆರೆ 11.4, ಹೊನ್ನವಳ್ಳಿ 10.4, ಹಾಲ್ಕುರಿಕೆ 3.2, ಚಿಕ್ಕನಾಯಕನಹಳ್ಳಿ ತಾಲ್ಲೂಕು ಸಿಂಗದಹಳ್ಳಿ 6.3 ಮಿ.ಮೀ, ತುರುವೇಕೆರೆ ತಾಲ್ಲೂಕು ದಬ್ಬೇಘಟ್ಟ 10.2, ಕೊರಟಗೆರೆ ತಾಲ್ಲೂಕು ಕೋಳಾಲ 2.4, ಹೊಳವನಹಳ್ಳಿ 7, ಪಾವಗಡ 4, ತಿರುಮಣಿ 10, ನಾಗಲಮಡಿಕೆ 17 ಮಿ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT