ಗುಬ್ಬಿ: ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ವೀರಣ್ಣನಗುಡಿ ಗ್ರಾಮದ ವೀರಭದ್ರೇಶ್ವರ ಸ್ವಾಮಿ ರಥೋತ್ಸವದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಜಾರಿಬಿದ್ದು, ರಥದ ಚಕ್ರಕ್ಕೆ ಸಿಲುಕಿದ್ದರ ಪರಿಣಾಮ, ಕೈ ಸಂಪೂರ್ಣ ಜಜ್ಜಿ ಹೋಗಿರುವ ಘಟನೆ ಗುರುವಾರ ನಡೆದಿದೆ.
ರಥೋತ್ಸವದ ಸಂದರ್ಭದಲ್ಲಿ ಸಮೀಪದಲ್ಲೇ ನಿಂತಿದ್ದ ನಾರನಹಳ್ಳಿ ಗ್ರಾಮದ ರುದ್ರೇಶ್ (40) ರಥ ಚಲಿಸುವಾಗ ಬಾಳೆ ಹಣ್ಣಿನ ಮೇಲೆ ಕಾಲಿಟ್ಟು ಜಾರಿಬಿದ್ದು ಈ ಅವಘಡ ಸಂಭವಿಸಿದೆ.
ಸಮೀಪದಲ್ಲೇ ಇದ್ದ ಪೊಲೀಸರು ತಕ್ಷಣ ಎಚ್ಚೆತ್ತುಕೊಂಡು ರುದ್ರೇಶ್ ಅವರನ್ನು ಎಳೆದುಕೊಂಡಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಗಾಯಾಳುವನ್ನು ಚಿಕಿತ್ಸೆಗೆ ಕರೆದೊಯ್ಯಲು ಆಂಬುಲೆನ್ಸ್ ದೊರೆಯದ ಕಾರಣ ಪೊಲೀಸರ ವಾಹನದಲ್ಲೇ ಗುಬ್ಬಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಯಿತು.
ಗುಬ್ಬಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.