ಮಧುಗಿರಿ: ತಾಲ್ಲೂಕು ಚಿನ್ನೇನಹಳ್ಳಿ ಗ್ರಾಮದ ಸಮೀಪ ಜಯರಾಮರೆಡ್ಡಿ ಎಂಬುವವರ ಬಾಳೆ ತೋಟದಲ್ಲಿ ಕಾಣಿಸಿಕೊಂಡಿದ್ದ ಗಂಡು ಕರಡಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ ಸರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.
ಬುಧವಾರ ಬೆಳಿಗ್ಗೆ ಬಾಳೆ ತೋಟದಲ್ಲಿ ಗಂಡು ಕರಡಿ (9 ವರ್ಷ) ತೋಟದ ಮಾಲೀಕನಿಗೆ ಕಾಣಿಸಿಕೊಂಡಿದೆ. ಕೂಡಲೇ ಈ ವಿಷಯವನ್ನು ಅರಣ್ಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಮುಟ್ಟಿಸಿದರು. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಹಾಸನ ವಿಭಾಗದ ಅರವಳಿಕೆ ತಜ್ಞರನ್ನು ಕರೆಯಿಸಿ, ಅರವಳಿಕೆ ಚುಚ್ಚುಮದ್ದು ನೀಡಿ ಕರಡಿಯನ್ನು ಸೆರೆ ಹಿಡಿದರು.
ಬಳಿಕ ಆರೋಗ್ಯ ತಪಾಸಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಕರಡಿಯನ್ನು ಬಿಟ್ಟಿದ್ದಾರೆ. ತೋಟದಲ್ಲಿರುವ ಕರಡಿ ವಿಚಾರ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡು ಕರಡಿ ಸರೆ ಹಿಡಿಯುವುದನ್ನು ವೀಕ್ಷಿಸಿದರು.
ಉಪವಲಯ ಅರಣ್ಯ ಅಧಿಕಾರಿ ಸೋಮಶೇಖರ್, ವಲಯ ಅರಣ್ಯ ಅಧಿಕಾರಿ ವಾಸದೇವಮೂರ್ತಿ, ಅರಣ್ಯ ರಕ್ಷಕರಾದ ಲಿಂಗೇಶ್, ಚಂದ್ರು, ಕರಿಯಣ್ಣ ಹಾಗೂ ಪೊಲೀಸರು ಹಾಜರಿದ್ದರು.
ಮಿಡಿಗೇಶಿ ಹೋಬಳಿಯ ಸುತ್ತಮುತ್ತಲಿನ ಗ್ರಾಮದಲ್ಲಿ ಕರಡಿಗಳ ಹಾವಳಿ ಹೆಚ್ಚಾಗಿದ್ದು, ತಕ್ಷಣ ಕಡಿವಾಣ ಹಾಕಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.