ತುರುವೇಕೆರೆ: ಸಿ.ಎಸ್.ಪುರ ಹೋಬಳಿಯ ಡಿ.ರಾಂಪುರದಲ್ಲಿ ನಡೆಯುತ್ತಿರುವ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಮೇ 16ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಗೆ ಹೇಮಾವತಿ ಗೊರೂರು ಜಲಾಶಯದಿಂದ 24.5 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಆದರೆ ಪ್ರತಿ ವರ್ಷವೂ ಸಮರ್ಪಕವಾಗಿ ನೀರು ಹರಿಯುತ್ತಿಲ್ಲ. ಟಿಬಿಸಿ ನಾಲೆಯಿಂದ 7.5 ಅಡಿ ಆಳದಲ್ಲಿ ಪೈಪ್ಲೈನ್ ಮೂಲಕ ನೀರು ರಾಮನಗರಕ್ಕೆ ಹರಿದರೆ ತಾಲ್ಲೂಕಿನ ದಂಡಿನಶಿವರ, ಕಸಬಾ, ಸಂಪಿಗೆ ಸಿ.ಎಸ್.ಪುರ ಹೋಬಳಿ ಭಾಗದ ರೈತರಿಗೆ ನೀರು ಸಿಗದಂತೆ ಆಗುತ್ತದೆ ಎಂದರು.
ಟಿ.ಬಿಸಿಯ 24.5 ಟಿಎಂಸಿ ನೀರಲ್ಲಿ 19.4 ಟಿಎಂಸಿ ನೀರು ಕಳೆದರೆ 11.5 ಟಿಎಂಸಿ ನೀರು ರಾಮನಗರಕ್ಕೆ ಹೋದರೆ ಇನ್ನುಳಿದ 8.4 ಟಿಎಂಸಿ ನೀರನ್ನು ಇಡೀ ಜಿಲ್ಲೆಯ ತಾಲ್ಲೂಕುಗಳಿಗೆ ಹಂಚಲು ಸಾದ್ಯವಾಗುವುದಿಲ್ಲ ಎಂದರು.
ಈ ಯೋಜನೆಯ ಪರಿಣಾಮವಾಗಿ ಮಧುಗಿರಿ, ಕೊರಟಗೆರೆ, ದಂಡಿನಶಿವರ, ಸಿ.ಎಸ್.ಪುರ, ತುಮಕೂರು ಗ್ರಾಮಾಂತರ ಮತ್ತು ಗುಬ್ಬಿ ತಾಲ್ಲೂಕುಗಳಿಗೆ ಒಂದು ಹನಿ ನೀರು ಬಿಡಲು ಸಾಧ್ಯವಾಗುವುದಿಲ್ಲ ಎಂದರು.
ಈ ಕಾಮಗಾರಿಯೇ ಅವೈಜ್ಞಾನಿಕ. ರಾಮನಗರಕ್ಕೆ ನೀರು ಬಿಡಲು ಆಗುವುದಿಲ್ಲವೆಂದು ಜಿಲ್ಲೆಯ ಅಧಿಕಾರಿಗಳೇ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಆದಾಗ್ಯೂ ಸರ್ಕಾರ ಜಿಲ್ಲೆಯ ರೈತರ ಮೇಲೆ ದಬ್ಬಾಳಿಕೆ ನಡೆಸಿ ನೀರು ತೆಗೆದುಕೊಂಡು ಹೋಗುತ್ತಿದೆ. ಇದನ್ನು ಖಂಡಿಸಿ ಡಿ.ರಾಂಪುರದ ಹೇಮಾವತಿ ನಾಲೆಯ ಬಳಿ ಬೆಳಗ್ಗೆ 11 ಗಂಟೆಗೆ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ತಡೆಗೆ ಬೃಹತ್ ಹೋರಾಟ ಮಾಡಲಾಗುತ್ತಿದೆ ಎಂದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ದೊಡ್ಡೇಗೌಡ, ವೆಂಕಟಾಪುರ ಯೋಗೀಶ್, ಬಿ.ಎಸ್.ದೇವರಾಜ್, ಬಣ್ಣದಂಗಡಿ ರಂಗನಾಥ್, ಮಂಗಿಕುಪ್ಪೆ ಬಸವರಾಜು, ಹೊನ್ನೇನಹಳ್ಳಿ ಕೃಷ್ಣ ಇದ್ದರು.