ಚಿಕ್ಕನಾಯಕನಹಳ್ಳಿ: ಗುರುಸಿದ್ಧರಾಮೇಶ್ವರರು ಕೆರೆ ಕಟ್ಟೆ ನಿರ್ಮಿಸುವ ಮೂಲಕ ರೈತರಿಗೆ ಅನುಕೂಲ ಮಾಡಿದ್ದರು. ಅಂತರ್ಜಾತಿ ವಿವಾಹ ಮಾಡಿಸುವ ಮೂಲಕ ಸಾಮಾಜಿಕ ಪರಿವರ್ತನೆಯ ಹರಿಕಾರರಾಗಿದ್ದರು ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಎಂ. ಬಿದರಿ ಹೇಳಿದರು.
ತಾಲ್ಲೂಕಿನ ಗೋಡೆಕೆರೆಯಲ್ಲಿ ನಡೆದ ಗುರುಸಿದ್ಧರಾಮೇಶ್ವರರ ಜಯಂತಿಯಲ್ಲಿ ಮಾತನಾಡಿದರು.
ಗುರಸಿದ್ಧರಾಮೇಶ್ವರರು ಜನರಲ್ಲಿನ ಮೌಡ್ಯ, ಜಾತಿ ಪದ್ಧತಿ ತೊಲಗಿಸಿ, ಸಮಾನತೆ ಸಾರಿದರು. ಸಿದ್ಧರಾಮೇಶ್ವರರು 16 ಸಾವಿರ ಕೆರೆ, ಕಟ್ಟೆಗಳನ್ನು ಕಟ್ಟಿಸಿದರು. ಸೊಲ್ಲಾಪುರದಲ್ಲಿ ಭವ್ಯ ವಾದ ದೇವಸ್ಥಾನ ಕಟ್ಟಿಸಿದ್ದಾರೆ ಎಂದರು.
ನೊಳಂಬ ವೀರಶೈವ ಸಮುದಾಯದ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ, ಒಳ್ಳೆಯ ಸಂಸ್ಕಾರ ನೀಡಿ, ನಿಮ್ಮ ಸಂಪಾದನೆಯಲ್ಲಿ ಸ್ವಲ್ಪ ಭಾಗವಾದರೂ ಸಮಾಜಕ್ಕೆ ನೀಡಿ ಎಂದು ಸಲಹೆ ನೀಡಿದರು.
ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಸಿದ್ಧರಾಮೇಶ್ವರ ಅವರ ತತ್ವಾದರ್ಶ ಪಾಲಿಸಿ, ಕಾಯಕ ಮಾಡಿ ಬೆಳೆಯುತ್ತೀರಿ. ವೀರಶೈವ ಸಮಾಜ ದಾನ-ಧರ್ಮಕ್ಕೆ ಗುರುತಿಸಿಕೊಂಡಿರುವ ಸಮಾಜ, ಕಷ್ಟದಲ್ಲಿರುವವರನ್ನು ಮೇಲುತ್ತುವುದೇ ವೀರಶೈವ ಸಮಾಜದ ಸಿದ್ದಾಂತ ಎಂದರು.
ಗೋಡೆಕೆರೆ ಮಠದ ಮೃತ್ಯುಂಜಯದೇಶೀಕೇಂದ್ರ ಸ್ವಾಮೀಜಿ, ‘ಯಾವುದೇ ಸಮಾಜ ಅಭಿವೃದ್ಧಿ ಯಾಗಬೇಕು ಎಂದರೆ ಶಿಕ್ಷಣ ಅಗತ್ಯ. ಎಲ್ಲರೂ ಸಂಘಟಿತರಾಗಿ ಸಮಾಜವನ್ನು ಬೆಳೆಸಿರಿ ಎಂದು ಸಲಹೆ ನೀಡಿದರು.
ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ, ‘ಗುರುಸಿದ್ಧರಾಮೇಶ್ವರರ ತತ್ವ ಅನುಸರಿಸಿ ಈಗಿನ ಸಚಿವರು ಚಿ.ನಾ.ಹಳ್ಳಿ ಕೆರೆಗಳಿಗೆ ನೀರು ಹರಿಸುವುದರ ಜೊತೆಗೆ ಜಿಲ್ಲೆಯ ಎಲ್ಲ ಕೆರೆಗಳಿಗೂ ನೀರು ಹರಿಸಿ’ಎಂದರು.
ಶಾಸಕ ಲಿಂಗೇಶ್ ಮಾತನಾಡಿ, ಗುರುಸಿದ್ಧರಾಮೇಶ್ವರರು 68 ಸಾವಿರವಚನ ಬರೆದಿದ್ದಾರೆ. ಆದರೆ ದೊರಕಿರು ವುದು 1,378 ಮಾತ್ರ. ಸಚಿವರು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಗುರಸಿದ್ಧರಾಮೇಶ್ವರರ ಅಧ್ಯಯನ ಪೀಠ ಆರಂಭಿಸಬೇಕು ಎಂದರು.
ಶಾಸಕ ಜ್ಯೋತಿಗಣೇಶ್ ಮಾತನಾಡಿದರು. ಶಾಸಕ ಬಿ.ಸಿ.ನಾಗೇಶ್, ನೊಳಂಬ ವೀರಶೈವ ಸಂಘದ ಅಧ್ಯಕ್ಷ ನಾಗರಾಜು, ಮಾಜಿ ತಾ.ಪಂ.ಅಧ್ಯಕ್ಷ ಹೆಚ್.ಆರ್.ಶಶಿಧರ್, ಮುಖಂಡ ಶಿವರಾಜು, ತಾ.ಪಂ.ಸದಸ್ಯ ಶೈಲಾ ಇದ್ದರು.