ತುಮಕೂರು: ‘ಯಾವಾಗ ಬಂದ್ರಿ... ಪ್ರಸಾದ ಮಾಡಿ... ಆರಾಮಾಗಿದ್ದೀರಾ...’ -ಇವು ಬುಧವಾರ ರಾತ್ರಿ ಜ್ವರದಿಂದ ಬಳಲಿ ಚಿಕಿತ್ಸೆ ಬಳಿಕ ಗುರುವಾರ ಬೆಳಿಗ್ಗೆ ಚೇತರಿಸಿಕೊಂಡ ಇಲ್ಲಿನ ಸಿದ್ಧಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ಅವರು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರೊಂದಿಗೆ ಆಡಿದ ಮಾತುಗಳಿವು.
ಸ್ವಾಮೀಜಿ ಅವರಿಗೆ ಜ್ವರ ಬಂದ ಮಾಹಿತಿ ತಿಳಿದ ಉಪಮುಖ್ಯಮಂತ್ರಿ ಬೆಳಿಗ್ಗೆ ಅವರ ಆರೋಗ್ಯ ವಿಚಾರಿಸಲು ದೌಡಾಯಿಸಿದಾಗ ಸ್ವಾಮೀಜಿ ಅವರು ಎಂದಿನಂತೆಯೇ ಸಹಜವಾಗಿ ಮಾತನಾಡಿದರು.
ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಾ.ಪರಮೇಶ್ವರ, 'ಬುಧವಾರ ರಾತ್ರಿ ಜ್ವರ ಕಾಣಿಸಿಕೊಂಡಿದ್ದರಿಂದ ಸ್ವಲ್ಪ ಆತಂಕವಿತ್ತು. ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಎಂದಿನಂತೆಯೇ ನಮ್ಮನ್ನು ಸ್ವಾಮೀಜಿ ಮಾತನಾಡಿಸಿದರು’ ಎಂದು ಹೇಳಿದರು. ‘ತಮಗೆ ಎಷ್ಟು ವಯಸ್ಸಾಯ್ತು ಎಂದು ತಿಳಿಯಲು ಕಿರಿಯ ಶ್ರೀಗಳಾದ ಡಾ.ಸಿದ್ಧಲಿಂಗ ಸ್ವಾಮೀಜಿ ಅವರ ಮುಖ ನೋಡಿ ಎಷ್ಟು ಆಯ್ತು ಅಂಥಾ ಕೇಳಿದ್ರು. ಕಿರಿಯ ಶ್ರೀಗಳು 111 ಎಂದು ಹೇಳಿದಾಗ ಬಹಳ ಆಯ್ತು. ಬಹಳ ಆಯ್ತು ಎಂದು ನುಡಿದರು’ ಎಂದು ತಮ್ಮ ಭೇಟಿ ಕ್ಷಣಗಳನ್ನು ಡಾ.ಪರಮೇಶ್ವರ ವಿವರಿಸಿದರು.
‘ಸದ್ಯಕ್ಕೆ ಸ್ವಾಮೀಜಿ ಆರೋಗ್ಯವಾಗಿದ್ದಾರೆ. ಯಾರೂ ಆತಂಕ ಪಡಬೇಕಾಗಿಲ್ಲ’ ಎಂದು ಸ್ಪಷ್ಪಪಡಿಸಿದರು.
ಗುರುವಾರ ಬೆಳಿಗ್ಗೆ ಸಿದ್ಧಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯವನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ವಿಚಾರಿಸಿದರು. ಕಿರಿಯ ಶ್ರೀಗಳಾದ ಡಾ.ಸಿದ್ಧಲಿಂಗ ಸ್ವಾಮೀಜಿ ಇದ್ದರು
‘ಬುಧವಾರ ರಾತ್ರಿ ಸ್ವಾಮೀಜಿ ಆರೋಗ್ಯ ತಪಾಸಣೆ ಮಾಡಿದ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ವೈದ್ಯರು ವೈದ್ಯಕೀಯ ವರದಿಗಳೊಂದಿಗೆತಜ್ಞ ವೈದ್ಯರ ಜತೆ ಸ್ವಾಮೀಜಿಯವರ ಚಿಕಿತ್ಸೆಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಲು ಚೆನ್ನೈಗೆ ತೆರಳಿದ್ದಾರೆ. ಅವರು ಬಂದ ಬಳಿಕ ಚಿಕಿತ್ಸೆಯನ್ನು ಇಲ್ಲಿಯೇ ಮುಂದುವರಿಸಬೇಕೆ ಅಥವಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಡೆಸಬೇಕೆ ಎಂಬುದರ ಬಗ್ಗೆಅವರೇ ತೀರ್ಮಾನ ಮಾಡಲಿದ್ದಾರೆ’ ಎಂದು ವಿವರಿಸಿದರು.
ಮಠದ ಆಡಳಿತಾಧಿಕಾರಿ ಹೇಳಿಕೆ: ‘ಬುಧವಾರ ರಾತ್ರಿ ಸ್ವಲ್ಪ ಜ್ವರ ಕಾಣಿಸಿಕೊಂಡಿದ್ದರಿಂದ ಆತಂಕವಾಗಿತ್ತು. ವೈದ್ಯರು ತಪಾಸಣೆ ಮಾಡಿ ಚಿಕಿತ್ಸೆ ನೀಡಿದ್ದು, ಸ್ವಾಮೀಜಿ ಗುಣಮುಖರಾಗಿದ್ದಾರೆ. ಎಂದಿನಂತೆಯೇ ಪೂಜಾ ವಿಧಾನ ನೆರವೇರಿಸಿ ಪ್ರಸಾದ ಸ್ವೀಕರಿಸಿದ್ದಾರೆ. ವೈದ್ಯರ ಸಲಹೆ ಮೇರೆಗೆ ಭಕ್ತರಿಗೆ ದರ್ಶನ ಮಾಡಲು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ’ ಎಂದು ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.