ತುಮಕೂರು: ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಶನಿವಾರ ಹಳ್ಳಿಯ ವಾತಾವರಣ ಕಂಡು ಬಂತು. ಹಳ್ಳಿಗಾಡಿನಿಂದ ಕಣ್ಮರೆಯಾಗುತ್ತಿರುವ ಮರದ ನೇಗಿಲು, ರಾಗಿ ಜರಡೆ, ಎತ್ತಿನ ಬಂಡಿಗಳು ಗಮನ ಸೆಳೆದವು.
ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಿರಿ ಧಾನ್ಯ ಹಬ್ಬ ಹಾಗೂ ಸಿರಿ ಧಾನ್ಯ ಉತ್ಪಾದಕರು ಮತ್ತು ಮಾರುಕಟ್ಟೆದಾರರ ಕಾರ್ಯಾಗಾರದ ಪ್ರಯುಕ್ತ ಅಳಿವಿನಂಚಿನಲ್ಲಿರುವ ಅನೇಕ ಕೃಷಿ ಉಪಕರಣಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
ರಾಗಿ ಕಣ ಮಾಡಿ, ಗುಡಿಸಲು ನಿರ್ಮಿಸಿ ಬರಗು, ಸಾಮೆ, ಹಾರಕ, ನವಣೆ, ಊದಲು ಸೇರಿದಂತೆ ವಿವಿಧ ಸಿರಿ ಧಾನ್ಯಗಳನ್ನು ಪ್ರದರ್ಶಿಸಲಾಯಿತು. 60ಕ್ಕೂ ಹೆಚ್ಚು ಸಿರಿ ಧಾನ್ಯ ಉತ್ಪಾದಕರ ಮಳಿಗೆಗಳನ್ನು ತೆರೆಯಲಾಗಿತ್ತು. ಹಲವು ಬಗೆಯ ಕೃಷಿ ಉಪಕರಣಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು. ಆಧುನಿಕ ಉಪಕರಣಗಳನ್ನು ಬಳಸಿಕೊಂಡು, ಉತ್ತಮ ಇಳುವರಿ ತೆಗೆಯುವ ಕುರಿತು ತಿಳಿಸಿಕೊಡಲಾಯಿತು.
ಕೃಷಿ ಕ್ಷೇತ್ರದಿಂದಲೇ ಕಣ್ಮರೆಯಾಗುತ್ತಿರುವ ಮರದ ನೇಗಿಲು, ರಾಗಿ ಬೀಸುವ ಕಲ್ಲು, ರಾಗಿ ಜರಡೆ, ಎತ್ತಿನ ಗಾಡಿಯ ನೊಗ, ಗಾರೆ, ಪಿಕಾಸಿ, ಗುದ್ದಲಿ, ಒನಕೆ ಸೇರಿದಂತೆ ಅನೇಕ ಕೃಷಿ ಉಪಕರಣಗಳನ್ನು ಸಾರ್ವಜನಿಕರು ಕಣ್ತುಂಬಿಕೊಂಡರು. ದವಸ ಧಾನ್ಯಗಳನ್ನು ಅಳೆಯುತ್ತಿದ್ದ ಸೇರು, ಪಾವು, ಅಚ್ಚೇರುಗಳನ್ನು ಜನತೆಗೆ ಪರಿಚಯಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರು ಜೂನಿಯರ್ ಕಾಲೇಜು ಮೈದಾನದ ಮುಂಭಾಗದಲ್ಲಿರುವ ಬಿ.ಎಚ್.ರಸ್ತೆಯಿಂದ ಎತ್ತಿನ ಬಂಡಿ ಮೆರವಣಿಗೆಯಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಬಂದರು. ಅಲಂಕೃತ ಬಂಡಿಯಲ್ಲಿ ಹೆಗಲು ಮೇಲೆ ಹಸಿರು ಶಾಲು ಹಾಕಿಕೊಂಡು ಬಂಡಿ ಓಡಿಸಿದರು. ರಾಗಿಯ ಕಣಕ್ಕೆ ಪೂಜೆ ಸಲ್ಲಿಸಿ, ಕೃಷಿ ಉಪಕರಣ, ಸಿರಿ ಧಾನ್ಯಗಳನ್ನು ವೀಕ್ಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.