ಉಡುಪಿ: ಹೊರ ರಾಜ್ಯಗಳಲ್ಲಿ ನೆಲೆಸಿರುವ ಉಡುಪಿ ಜಿಲ್ಲೆಯ 243 ಮಂದಿ ಭಾನುವಾರ ಜಿಲ್ಲೆಗೆ ಮರಳಿದರು. ಖಾಸಗಿ ವಾಹನಗಳ ಮೂಲಕ ಜಿಲ್ಲೆಯ ಗಡಿ ತಲುಪಿದವರನ್ನು ಚೆಕ್ಪೋಸ್ಟ್ನಲ್ಲಿ ಆರೋಗ್ಯ ತಪಾಸಣೆ ನಡೆಸಿ, ಆಯಾ ತಾಲ್ಲೂಕು ಆಡಳಿತಕ್ಕೆ ಒಪ್ಪಿಸಲಾಯಿತು. ಬಳಿಕ ಎಲ್ಲರನ್ನೂ ಸರ್ಕಾರಿ ಕ್ವಾರಂಟೈನ್ಗೆ ಕರೆದೊಯ್ಯಲಾಯಿತು.
ಕುಂದಾಪುರ ತಾಲ್ಲೂಕಿಗೆ 103, ಬೈಂದೂರಿಗೆ 3, ಕಾರ್ಕಳಕ್ಕೆ 39, ಬ್ರಹ್ಮಾವರಕ್ಕೆ 1, ಉಡುಪಿಗೆ 24, ಹೆಬ್ರಿಗೆ ಇಬ್ಬರು ಬಂದರು. ಹೊರ ರಾಜ್ಯಗಳಿಂದ ಜಿಲ್ಲೆಗೆ ಇದುವರೆಗೂ 471 ಮಂದಿ ಬಂದಿದ್ದಾರೆ. ಜಿಲ್ಲೆಗೆ ಮರಳುತ್ತಿರುವವರ ಪೈಕಿ ಮುಂಬೈನಿಂದ ಬರುತ್ತಿರುವವ ಸಂಖ್ಯೆ ಹೆಚ್ಚಾಗಿದೆ.
ಉಡುಪಿ ಜಿಲ್ಲೆಯ20,000ಕ್ಕೂ ಹೆಚ್ಚು ಮಂದಿ ಹೊರ ಜಿಲ್ಲೆಗಳಲ್ಲಿದ್ದು, ಅವರೆಲ್ಲ ಹಂತಹಂತವಾಗಿ ಜಿಲ್ಲೆಗೆ ಮರಳುತ್ತಿದ್ದಾರೆ. ಮೊದಲ ಹಂತವಾಗಿ ಸ್ವಂತ ವಾಹನ ಹೊಂದಿರುವ ಕುಟುಂಬಗಳಿಗೆ ಮಾತ್ರ ಪಾಸ್ ನೀಡಲಾಗುತ್ತಿದ್ದು, ರೈಲು ಸಂಚಾರ ವ್ಯವಸ್ಥೆಯಾದರೆ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆಗಳಿವೆ.
ಮಾಸ್ಕ್ ಕಡ್ಡಾಯ: ಡಿಸಿ ಸಾರ್ವಜನಿಕರು ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚನೆ ನೀಡಿದ್ದಾರೆ.
ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲಾಡಳಿತ ಬೆಳಿಗ್ಗೆ 7ರಿಂದ ರಾತ್ರಿ 7ರವರೆಗೆ ಅನುಮತಿ ನೀಡಿದೆ. ಈ ಅವಧಿಯಲ್ಲಿ ಹೊರಬರುವ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಖರೀದಿ ವೇಳೆ ಅಂತರ ಕಾಯ್ದುಕೊಳ್ಳಬೇಕು. ಇಲ್ಲವಾದರೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ಪಿಎಸ್ಐಗಳು, ಆರೋಗ್ಯ ನಿರೀಕ್ಷಕರು, ಪಿಡಿಒಗಳು, ತಹಶೀಲ್ದಾರ್ಗಳು, ನಗರಸಭೆ ಆಯುಕ್ತರು ಹಾಗೂ ಉಪ ವಿಭಾಗಾಧಿಕಾರಿಗಳುಕಾರ್ಯಾಚರಣೆ ನಡೆಸುತ್ತಿದ್ದು ಮಾಸ್ಕ್ ಧರಿಸದಿರುವುದು ಕಂಡುಬಂದರೆ ದಂಡ ವಿಧಿಸಲಿದ್ದಾರೆ. ನಗರಸಭೆ ವ್ಯಾಪ್ತಿಯಲ್ಲಿ ₹ 200, ಉಳಿದೆಡೆ ₹ 100 ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.