ಉಡುಪಿ: ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ವಾರಸುದಾರರು ಪತ್ತೆಯಾಗದ ಐದು ಅಪರಿಚಿತ ಶವಗಳ ಅಂತ್ಯಸಂಸ್ಕಾರ ಸೋಮವಾರ ಬೀಡಿನಗುಡ್ಡೆಯ ರುದ್ರಭೂಮಿಯಲ್ಲಿ ನೆರವೇರಿತು.
ಜಿಲ್ಲಾ ಆಸ್ಪತ್ರೆಯಲ್ಲಿ ಈಚೆಗೆ ಒಳರೋಗಿಗಳಾಗಿ ಬೈಂದೂರಿನ ರಾಜೀವ (50), ಉಡುಪಿಯ ರಮೇಶ (40), ಬ್ರಹ್ಮಾವರದ ಪ್ರವೀಣ (68)ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಈಚೆಗೆ ಮೂವರು ಮೃತಪಟ್ಟಿದ್ದರು.
ಸಾರ್ವಜನಿಕ ಸ್ಥಳದಲ್ಲಿ 75 ವರ್ಷದ ವೃದ್ಧರ ಶವ ಹಾಗೂ ಮಲ್ಪೆಯ ತೊಟ್ಟಂ ಸಮುದ್ರ ಕಿನಾರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಐದು ಶವಗಳ ವಾರಸುದಾರರು ಪತ್ತೆಯಾಗದ ಕಾರಣ ಶವ ಸಂಸ್ಕಾರ ನೆರವೇರಿಸಲಾಯಿತು ಸಮಾಜ ಸೇವಕ ನಿತ್ಯಾನಂದ ಒಳಕಾಡು ತಿಳಿಸಿದರು.
ಉಡುಪಿ ಜಿಲ್ಲಾ ನಾಗರಿಕ ಸಮಿತಿ ಶವಗಳನ್ನು ಸಾಗಿಲು ಉಚಿತ ಆಂಬುಲನ್ಸ್ ವ್ಯವಸ್ಥೆ ಮಾಡಿತ್ತು. ಶವಗಳ ಮೇಲೆ ಹೊದಿಸಲು ವ್ಯಾಪಾರಿ ವಿಷ್ಣು ಉಚಿತ ಹೂವಿನ ಹಾರಗಳನ್ನು ನೀಡಿದರು.
ಕಾನೂನು ಪ್ರಕ್ರಿಯೆಗಳು ನೆರವೇರಿದ ಬಳಿಕ ಉಡುಪಿ ನಗರ ಠಾಣೆಯ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು, ಮಲ್ಪೆ ಠಾಣೆಯ ಜಯಕರ್ ಪಾಲನ್, ಎಸ್.ಎಂ.ಕಲಾದಗಿ ಸಮಕ್ಷಮದಲ್ಲಿ ಸಮಾಜಸೇವಕ ತಾರಾನಾಥ್ ಮೇಸ್ತ ಶಿರೂರು ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದರು ಎಂದು ಒಳಕಾಡು ತಿಳಿಸಿದರು.