ಉಡುಪಿ: ಜಿಲ್ಲೆಯಾದ್ಯಂತ ಶನಿವಾರವೂ ಮಳೆ ಮುಂದುವರಿದೆ. ಬಿರುಗಾಳಿ ಮಳೆಗೆ ಕಾಪು ತಾಲ್ಲೂಕಿನ ಬೆಳಪು, ಮೂಡಬೆಟ್ಟು, ನಡ್ಸಾಲು, ಹೆಜಮಾಡಿ, ಬೆಳಪು ಗ್ರಾಮದಲ್ಲಿ ಮನೆಯ ಮೇಲೆ ಮರಬಿದ್ದು ಹಾನಿಯಾಗಿದೆ.
ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸಮುದ್ರ ಪ್ರಕ್ಷುಬ್ದಗೊಂಡಿದ್ದು ಅಲೆಗಳ ಅಬ್ಬರ ಹೆಚ್ಚಾಗಿದೆ. ಮಂಗಳೂರಿನಿಂದ ಕಾರವಾರದವರೆ ಚಾಚಿಕೊಂಡಿರುವ ಕಡಲತೀರಗಳಲ್ಲಿ 3.7 ಮೀಟರ್ವರೆಗೆ ದೈತ್ಯ ಅಲೆಗಳು ಏಳಬಹುದು. ಗಂಟೆಗೆ 50 ಕಿ.ಮೀ ವೇಗದಲ್ಲಿ ಗಾಳಿ ಬೀಸಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜೂನ್ 30ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, 11.5 ಸೆಂ.ಮೀನಿಂದ 20.4 ಸೆಂ.ಮೀವರೆಗೂ ಮಳೆ ಬೀಳಬಹುದು. ಮೀನುಗಾರರು ಸಮುದ್ರಕ್ಕಿಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ.