ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನೇತೃತ್ವದಲ್ಲಿ ದೇಶದಾದ್ಯಂತ ನಡೆಯುತ್ತಿರುವ ನಿಧಿ ಸಮರ್ಪಣೆ ಅಭಿಯಾನ ಶುಕ್ರವಾರ ವಿಶ್ವ ಹಿಂದೂ ಪರಿಷತ್ ಸಹಯೋಗದಲ್ಲಿ ಆರಂಭವಾಯಿತು.
ಕೃಷ್ಣಮಠದ ಮಧ್ವಮಂಟಪದಲ್ಲಿ ಪರ್ಯಾಯ ಅದಮಾರು ಮಠ, ಕೃಷ್ಣಾಪುರ ಮಠ, ಪೇಜಾವರ ಮಠ, ಪಲಿಮಾರು ಮಠ, ಕಾಣಿಯೂರು ಮತ್ತು ಸೋದೆ ಮಠದ ಶ್ರೀಗಳು ಮಠಗಳಿಂದ ಅಭಿಯಾನಕ್ಕೆ ನಿಧಿ ಸಮರ್ಪಿಸಿ ಚಾಲನೆ ನೀಡಿದರು. ವಿಶ್ವ ಹಿಂದೂ ಪರಿಷತ್ನ ಜಿಲ್ಲಾ ಘಟಕದ ಅಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ ನೇತೃತ್ವದ ತಂಡಕ್ಕೆ ಅಷ್ಠಮಠದ ಯತಿಗಳು ಚೆಕ್ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅದಮಾರು ಮಠದ ವಿಶ್ವಪ್ರಿಯತೀರ್ಥ ಸ್ವಾಮೀಜಿ, ಕನ್ನಡಿಯಲ್ಲಿ ಬಿಂಬ ಚೆಂದವಾಗಿ ಕಾಣಲು ಮುಖಕ್ಕೆ ಅಲಂಕಾರ ಬೇಕು, ಕನ್ನಡಿಗಲ್ಲ. ಅಹಂಕಾರ ಭಾವ ಬಿಟ್ಟು ಯಥಾ ಶಕ್ತಿಯಿಂದ ರಾಮಮಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣೆ ಮಾಡಬೇಕು ಎಂದರು.
ಈಚೆಗೆ ಕಟ್ಟಿದ ಸೇತುವೆಗಳು ಕುಸಿದು ಬಿದ್ದಿವೆ. ರಾಮಸೇತು ಮಾತ್ರ ಶಾಶ್ವತವಾಗಿ ಉಳಿದುಕೊಂಡಿದೆ. ರಾಮ ಸೇತುವೆ ನಿರ್ಮಾಣಕ್ಕೆ ಅಳಿಲು ಸೇವೆ ನೀಡಿದ ಅಳಿಲಿನಿಂತ ರಾಮ ನಿರ್ಮಾಣಕ್ಕೆ ಎಲ್ಲರೂ ಅಳಿಲು ಸೇವೆ ಮಾಡೋಣ ಎಂದರು.
ಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ರಾಮಮಂದಿರ ಹೋರಾಟದಲ್ಲಿ ಪೇಜಾವರ ವಿಶ್ವೇಶತೀರ್ಥರ ಶ್ರಮ ದೊಡ್ಡದಿದೆ. ಕರ ಸೇವೆಗೆ ಶರೀರ, ಪೂಜೆಗೆ ಮನಸ್ಸು ಹಾಗೂ ರಾಮ ಮಂದಿರ ನಿರ್ಮಾಣಕ್ಕೆ ಸಂಪತ್ತಿನ ಅಗತ್ಯವಿದೆ ಎಂದರು.
ಪಲಿಮಾರು ಮಠದ ವಿದ್ಯಾಧೀಶತೀರ್ಥ ಸ್ವಾಮೀಜಿ ಮಾತನಾಡಿ, ರಾಮಮಂದಿರ ನಿರ್ಮಾಣಕ್ಕೆ ಕೊಡುಗೆ ನೀಡಲು ದೇವರು ಕೊಟ್ಟಿರುವ ಅವಕಾಶವನ್ನು ಬಳಸಿಕೊಳ್ಳಬೇಕು ಎಂದರು.
ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ, ವಿಶ್ವ ಹಿಂದೂ ಪರಿಷತ್ನ ರಾಮಮಂದಿರಕ್ಕೆ ನಿಧಿ ಸಂಗ್ರಹಣಾ ಕಾರ್ಯದಲ್ಲಿ ತೊಡಗಿದ್ದು, ನಿರ್ವಿಘ್ನವಾಗಿ ನೆರವೇರಲಿ. ರಾಮನ ಅನುಗ್ರಹ ಎಲ್ಲರಿಗೂ ದೊರೆಯಲಿ ಎಂದರು.
ಪಲಿಮಾರು ಮಠದ ಕಿರಿಯ ಯತಿ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಮುಖಂಡರಾದ ಉದಯಕುಮಾರ್ ಶೆಟ್ಟಿ, ರಾಮಚಂದ್ರ ಸನಿಲ್, ಸುರೇಶ್ ಹೆಜಮಾಡಿ, ಗಣಪತಿ ನಾಯಕ್ ಇದ್ದರು.