ಉಡುಪಿ: ರಾಜ್ಯದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣಾ ಕಾಯ್ದೆ ಜಾರಿಗೆ ಬಂದಿದ್ದು, ಕಾಯ್ದೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಕಾಯ್ದೆ ಉಲ್ಲಂಘನೆಯಾಗದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪಶು ಸಂಗೋಪನೆ, ಹಜ್ ಹಾಗೂ ವಕ್ಫ್ ಸಚಿವ ಪ್ರಭು ಬಿ.ಚವ್ಹಾಣ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪಶು ಸಂಗೋಪನೆ, ಹಜ್ ಮತ್ತು ವಕ್ಫ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನೂತನ ಕಾಯ್ದೆಯ ವ್ಯಾಪ್ತಿಯಲ್ಲಿ ಹಸು, ಕರು, ಎತ್ತು, ಹೋರಿಗಳನ್ನು ಸೇರಿಸಲಾಗಿದ್ದು, 13 ವರ್ಷದೊಳಗಿನ ಎಮ್ಮೆ, ಕೋಣಗಳು ಬರುತ್ತವೆ. ಕಾಯ್ದೆಯನ್ನು ಮೊದಲ ಬಾರಿ ಉಲ್ಲಂಘಿಸಿದವರಿಗೆ 3 ರಿಂದ 6 ವರ್ಷ ಜೈಲು, ₹ 50,000 ದಿಂದ ₹ 5 ಲಕ್ಷದವರೆಗೆ ದಂಡ ಹಾಗೂ ಎರಡನೇ ಬಾರಿ ಉಲ್ಲಂಘಿಸುವವರಿಗೆ ₹ 10 ಲಕ್ಷದವರೆಗೆ ದಂಡ ವಿಧಿಸಲಾಗುವುದು ಎಂದರು.
ಜಾನುವಾರುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಾಣೆ ಮಾಡಬೇಕಾದರೆ ವೈದ್ಯರ ಪ್ರಮಾಣ ಪತ್ರ ಮತ್ತು ಮಾಲೀಕನ ವಿವರಗಳು, ಪಶುಗಳಿಗೆ ಕಿವಿಯೋಲೆ ಹೊಂದಿರಬೇಕು. ಸಾಗಣೆ ಮಾಡುವಾಗ ಒಂದು ವಾಹನದಲ್ಲಿ 5 ರಿಂದ 6 ಜಾನುವಾರು ಇರಬೇಕು. ಆಹಾರ ಹಾಗೂ ನೀರಿನ ವ್ಯವಸ್ಥೆ ಮಾಡಬೇಕು. ಗರ್ಭಧಾರಿತ ಜಾನುವಾರು ಸಾಗಣೆಗೆ ಅವಕಾಶ ಇಲ್ಲ. ಸಾಗಣೆ ಮಾಡುವಾಗ ರಾತ್ರಿ 8ರಿಂದ ಬೆಳಿಗ್ಗೆ 6ರವರೆಗೆ ಅವಕಾಶ ಇಲ್ಲ. ಬೇಸಿಗೆ ಕಾಲದಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಅವಕಾಶ ನೀಡಬಾರದು ಎಂದರು.
ಪಶು ವೈದ್ಯಾಧಿಕಾರಿಗಳು ಜಾನುವಾರು ರಕ್ಷಣೆಯ ಕುರಿತು ಜಾಗೃತಿ ಮೂಡಿಸಬೇಕು. ಪಶು ವೈದ್ಯಾಧಿಕಾರಿಗಳು ಆರೋಗ್ಯ ಶಿಬಿರಗಳನ್ನು ನಡೆಸಬೇಕು. ಗೋಶಾಲೆಗಳಿಗೆ ಭೇಟಿನೀಡಿ ಸಮಸ್ಯೆಗಳನ್ನು ತಿಳಿದು ಅಗತ್ಯ ಸೌಲಭ್ಯಗಳನ್ನು ನೀಡಬೇಕು. ಗ್ರಾಮಗಳಿಗೆ ತೆರಳಿ ಸಮಸ್ಯೆ ಪರಿಹರಿಸಬೇಕು. ಗ್ರಾಮಸಭೆಗಳಲ್ಲಿ ನೂತನ ಕಾಯ್ದೆಯ ಕುರಿತು ಅರಿವು ಮೂಡಿಸಬೇಕು. ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆಯ ಸಮರ್ಪಕ ಅನುಷ್ಠಾನ ಮಾಡಬೇಕು ಎಂದರು.
ಸಾರ್ವಜನಿಕರು ಜಾನುವಾರು ಸಾಕಲು ತೊಂದರೆಯಾಗದಂತೆ ನೋಡಿಕೊಳ್ಳಲು ಜಾನುವಾರುಗೆ ಮೇವು ಪೂರೈಕೆಯ ಜತೆಗೆ ವಿವಿಧ ಯೋಜನೆಯಡಿ ಅನುದಾನಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಜಾನುವಾರು ರಕ್ಷಿಸಲು ಗೋಶಾಲೆಗಳನ್ನು ಸರ್ಕಾರದ ಗೋಮಾಳ ಜಮೀನಿನಲ್ಲಿ ನಿರ್ಮಿಸಿ ಅಗತ್ಯ ಸೌಲಭ್ಯ ಪೂರೈಸಬೇಕು. ಇದುವರೆಗೂ ನೋಂದಣಿಯಾಗದಿರುವ ಗೋಶಾಲೆಗಳನ್ನು ತ್ವರಿತಗತಿಯಲ್ಲಿ ನೋಂದಾಯಿಸಿಕೊಂಡು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.
ಗೋಶಾಲಾ ನಿರ್ವಹಣೆಗೆ ನರೇಗಾ ಯೋಜನೆ ಅಡಿಯಲ್ಲಿ ಗೋಶಾಲೆಯ ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತದೆ. ಗೋಮಾಳ ಜಮೀನಿನಲ್ಲಿ ಮೇವು ಬೆಳೆಸಲಾಗುತ್ತದೆ. ಗೋಶಾಲೆಯಲ್ಲಿ ಕನಿಷ್ಠ 50 ಜಾನುವಾರು ಗರಿಷ್ಠ 200 ಜಾನುವಾರು ಇರಬೇಕು ಎಂದರು.
ಪೇತ್ರಿ ಮತ್ತು ಕೊಕ್ಕರ್ಣೆ ಪ್ರದೇಶಗಳಲ್ಲಿ ಹೆಚ್ಚು ಜಾನುವಾರು ಕಂಡುಬರುತ್ತವೆ. ಅವುಗಳ ರಕ್ಷಣೆಗೆ ಹೆಚ್ಚಿನ ಗಮನ ಹರಿಸಬೇಕು. ಪಶುಪಾಲನೆ ಕುರಿತು ಯೋಜನೆಗಳು ಮತ್ತು ಅನುದಾನಗಳ ಕುರಿತು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಉಡುಪಿ ಶಾಸಕ ರಘುಪತಿ ಭಟ್ ತಿಳಿಸಿದರು.
ಸಭೆಯಲ್ಲಿ ಉಡುಪಿ ಜಿಲ್ಲೆಯ ಪಶುಪಾಲನೆ ಇಲಾಖೆಯ ಉಪ ನಿರ್ದೇಶಕ ಹರೀಶ ತಮಣ್ಕರ್ , ವಿವಿಧ ತಾಲ್ಲೂಕುಗಳ ಪಶು ವೈದ್ಯಾಧಿಕಾರಿಗಳು, ಹಜ್ ಮತ್ತು ವಕ್ಫ್ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಮುಖ್ಯ ಪಶು ವೈದ್ಯಾಧಿಕಾರಿ ಡಾ. ಉದಯ್ ಕುಮಾರ್ ಸ್ವಾಗತಿಸಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.