ಬ್ರಹ್ಮಾವರ: ಬ್ರಹ್ಮಾವರ ಪರಿಸರದ ಕೆಲವೆಡೆ ಶುಕ್ರವಾರ ಸಂಜೆ ಉತ್ತಮ ಮಳೆ ಸುರಿಯಿತು. ನಗರದಲ್ಲಿ ಶುಕ್ರವಾರ ಸಂಜೆ ಸುರಿದ ಮಳೆಗೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಗೋಡೆ ಕುಸಿದು ನಷ್ಟ ಉಂಟಾಗಿದೆ.
ಮೈದಾನದಲ್ಲಿ ನೀರು ಶೇಖರಣೆಯಾಗಿ ಈ ಆವರಣ ಕುಸಿದಿದೆ. ಕಳಪೆ ಕಾಮಗಾರಿಯಿಂದ ಸತತ ಮೂರನೇ ಬಾರಿ ಈ ಗೋಡೆ ಕುಸಿದಿದೆ ಎಂದು ಸ್ಥಳೀಯರು ದೂರಿದ್ದಾರೆ.
ಅಪಾಯ: ಶಾಲೆಯ ಮೈದಾನದಲ್ಲಿಯೇ ತೆರೆದ ಬಾವಿ ಇದ್ದು, ಮಳೆಗಾಲದಲ್ಲಿ ಕುಸಿಯುವ ಭೀತಿ ಇದೆ, ಶಾಲಾ ವಿದ್ಯಾರ್ಥಿಗಳು ಇಲ್ಲೇ ಆಟವಾಡುವುದರಿಂದ ಮಳೆಗಾಲದೊಳಗೆ ಬಾವಿಯ ಸುತ್ತ ಕಾಂಪೌಂಡ್ ನಿರ್ಮಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರಭಸದ ಗಾಳಿಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿತ್ತು. ಚಾಂತಾರು, ಆರೂರು, ಹೇರೂರು ಪರಿಸರದಲ್ಲಿಯೂ ಉತ್ತಮವಾಗಿ ಮಳೆಯಾಯಿತು.
ಮಳೆ ಬಿರುಸು
ಉಡುಪಿ: ಉಡುಪಿಯಲ್ಲಿ ಶುಕ್ರವಾರ ಗುಡುಗು ಸಿಡಿಲು ಸಹಿತ ಬಿರುಸಿನ ಮಳೆ ಸುರಿಯಿತು. ಸಂಜೆ ಸುರಿದ ಭಾರಿ ಮಳೆಗೆ ಹಲವೆಡೆ ಸಂಚಾರ ಅಸ್ತವ್ಯಸ್ತವಾಗಿತ್ತು. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದವು.