ಉಡುಪಿ: ಲಾಕ್ಡೌನ್ನಿಂದಾಗಿ ಜಿಲ್ಲೆಯಲ್ಲಿ ಸಿಲುಕಿದ್ದ ಜಾರ್ಖಂಡ್ ರಾಜ್ಯದ 1,104 ಕಾರ್ಮಿಕರು ಬುಧವಾರ ಶ್ರಮಿಕ್ ವಿಶೇಷ ರೈಲಿನ ಮೂಲಕ ತವರು ರಾಜ್ಯಕ್ಕೆ ತೆರಳಿದರು.
ಇಂದ್ರಾಳಿ ರೈಲು ನಿಲ್ದಾಣದಿಂದ ಸಂಜೆ 5.45ಕ್ಕೆ ಹೊರಟ 01642 ರೈಲು ಮೇ 22ರಂದು ಬೆಳಿಗ್ಗೆ 7.15ಕ್ಕೆ ಜಾರ್ಖಂಡ್ನ ಹತಿಯಾ ನಿಲ್ದಾಣ ತಲುಪಲಿದೆ.
ಜಾರ್ಖಂಡ್ಗೆ ತೆರಳಲು ಸಾವಿರಾರು ವಲಸೆ ಕಾರ್ಮಿಕರು ಮಧ್ಯಾಹ್ನವೇ ರೈಲು ನಿಲ್ದಾಣದ ಬಳಿ ಸೇರಿದ್ದರು. ಅಧಿಕಾರಿಗಳು ಎಲ್ಲರ ಆರೋಗ್ಯ ತಪಾಸಣೆ ನಡೆಸಿ ನಿಲ್ದಾಣದ ಒಳಗೆ ಬಿಟ್ಟರು. ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ ಹಾಗೂ ಆಸರೆ ಚಾರಿಟೆಬಲ್ ಟ್ರಸ್ಟ್ನಿಂದ ಕಾರ್ಮಿಕರಿಗೆ ಆಹಾರ ಪೂರೈಸಲಾಯಿತು. ಬಳಿಕ ಕಾರ್ಮಿಕರು ಅಂತರ ಕಾಯ್ದುಕೊಂಡು ರೈಲು ಹತ್ತಿದರು.
ಜಿಲ್ಲಾಡಳಿತ ಮೇ 17ರಂದು 1,460 ಕಾರ್ಮಿಕರನ್ನು ಶ್ರಮಿಕ್ ರೈಲಿನಲ್ಲಿ ಉತ್ತರ ಪ್ರದೇಶಕ್ಕೆ ಕಳಿಸುವ ವ್ಯವಸ್ಥೆ ಮಾಡಿತ್ತು. ಜಿಲ್ಲೆಯಿಂದ ಜಾರ್ಖಂಡ್ಗೆ ತೆರಳುತ್ತಿರುವುದು 2ನೇ ಶ್ರಮಿಕ್ ರೈಲು.
ಈ ಸಂದರ್ಭಶಾಸಕ ರಘುಪತಿ ಭಟ್, ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್, ಪೌರಾಯುಕ್ತ ಆನಂದ್ ಸಿ.ಕಲ್ಲೋಳಿಕರ್, ನಗರಸಭಾ ಸದಸ್ಯ ಗಿರೀಶ್ ಅಂಚನ್, ಮಂಜುನಾಥ್, ರಾಘವೇಂದ್ರ ಕಿಣಿ, ಮಂಜುನಾಥ್ ಹೆಬ್ಬಾರ್ ಇದ್ದರು.