ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | ಬತ್ತಿದ ಜಲಮೂಲ: ನೀರಿನ ಸಮಸ್ಯೆ ಗಂಭೀರ

ಮೇ ಅಂತ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಗಂಭೀರ: ಆತಂಕ
Published 29 ಏಪ್ರಿಲ್ 2024, 8:06 IST
Last Updated 29 ಏಪ್ರಿಲ್ 2024, 8:06 IST
ಅಕ್ಷರ ಗಾತ್ರ

ಉಡುಪಿ: ಮಳೆಗಾಲ ಆರಂಭಕ್ಕೆ ತಿಂಗಳು ಬಾಕಿ ಇರುವಂತೆಯೇ ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ದಿನದಿಂದ ದಿನಕ್ಕೆ ಬಿಸಿಲ ಧಗೆ ಹೆಚ್ಚುತ್ತಿದ್ದು ನದಿ, ತೋಡು, ಕೆರೆ ಸೇರಿದಂತೆ ಜಲಮೂಲಗಳು ಬತ್ತಿ ಹೋಗುತ್ತಿದ್ದು ಜನ ಜಾನುವಾರುಗೆ ನೀರಿನ ಕೊರತೆ ಎದುರಾಗಿದೆ.

ಉಡುಪಿ ನಗರಸಭೆಯ 35 ವಾರ್ಡ್‌ಗಳು ಹಾಗೂ 6 ಗ್ರಾಮ ಪಂಚಾಯಿತಿಗಳಿಗೆ ಕುಡಿಯುವ ನೀರು ಪೂರೈಸುವ ಬಜೆ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿದೆ. ಸದ್ಯ ಜಲಾಶಯದಲ್ಲಿ ಲಭ್ಯವಿರುವ ನೀರು 20 ದಿನಗಳಿಗೆ ಮಾತ್ರ ಸಾಲಲಿದ್ದು, ಮೇ ತಿಂಗಳಲ್ಲಿ ಮಳೆ ಬಾರದಿದ್ದರೆ ಸಮಸ್ಯೆ ಗಂಭೀರವಾಗಲಿದೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

ತಿಂಗಳ ಹಿಂದೆ ಬಜೆ ಜಲಾಶಯದಲ್ಲಿ ಗರಿಷ್ಟ 6 ಮೀಟರ್ ನೀರು ಸಂಗ್ರಹವಿತ್ತು. ಲಭ್ಯವಿರುವ ನೀರನ್ನು ಮೇ ಅಂತ್ಯದವರೆಗೂ  ಪೂರೈಕೆ ಮಾಡುವ ಅಂದಾಜು ಮಾಡಲಾಗಿತ್ತು. ಆದರೆ, ಬಿಸಿಲಿನ ಧಗೆಗೆ ನೀರು ಹೆಚ್ಚಾಗಿ ಆವಿಯಾಗುತ್ತಿರುವುದು ಹಾಗೂ ಸಾರ್ವಜನಿಕರ ನೀರಿನ ಬಳಕೆ ಪ್ರಮಾಣ ಹೆಚ್ಚಿರುವುದರಿಂದ ಮೇ 15ರ ಬಳಿಕ ಸಮಸ್ಯೆ ಹೆಚ್ಚಾಗಲಿದೆ.

ಸದ್ಯ ಬಜೆ ಜಲಾಯಶದಲ್ಲಿ 3.61 ಮೀಟರ್ ಮಾತ್ರ ನೀರಿದ್ದು ಡೆಡ್‌ ಸ್ಟೋರೆಜ್‌ ಹೊರತುಪಡಿಸಿದರೆ 2 ಮೀಟರ್ ಮಾತ್ರ ಉಪಯೋಗಕ್ಕೆ ಸಿಗಲಿದೆ. ಲಭ್ಯವಿರುವ ನೀರನ್ನು ಮಳೆ ಬರುವವರೆಗೂ ಸಾರ್ವಜನಿಕರಿಗೆ ಪೂರೈಕೆ ಮಾಡಬೇಕಾದ ಸವಾಲು ನಗರಸಭೆಯ ಮುಂದಿದೆ ಎನ್ನುತ್ತಾರೆ ಪೌರಾಯುಕ್ತ ರಾಯಪ್ಪ.

ಸಮಸ್ಯೆ ಹೆಚ್ಚು ಬಾಧಿಸದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಬಜೆ ಜಲಾಶಯದ ಪಾತ್ರದಲ್ಲಿರುವ ಶಿರೂರು, ಮಾಣೈ, ಭಂಡಾರಿಬೆಟ್ಟು ಭಾಗದ ದೊಡ್ಡ ಗುಂಡಿಗಳಲ್ಲಿ ಸಂಗ್ರಹವಾಗಿರುವ ನೀರನ್ನು 2 ಪಂಪ್‌ಸೆಟ್‌ಗಳ ಮೂಲಕ ಜಲಾಶಯಕ್ಕೆ ಪಂಪ್‌ ಮಾಡಲಾಗುತ್ತಿದೆ. ಈಗಾಗಲೇ ಟ್ಯಾಂಕರ್‌ ನೀರು ಪೂರೈಕೆಗೆ ಅನುಮೋದನೆ ಪಡೆಯಲಾಗಿದ್ದು ದರ ನಿಗದಿಪಡಿಸಿ ಟೆಂಡರ್‌ ಕರೆಯಲಾಗಿದೆ. 15 ದಿನಗಳಲ್ಲಿ ಮಳೆ ಬಾರದಿದ್ದರೆ ತುರ್ತು ಟ್ಯಾಂಕರ್ ನೀರು ಪೂರೈಕೆಗೆ ನಗರಸಭೆ ಸನ್ನದ್ಧವಾಗಿದೆ. ರೇಷನಿಂಗ್ ಪದ್ಧತಿಯಲ್ಲಿ ನಲ್ಲಿ ನೀರು ಸರಬರಾಜು ಮಾಡುವ ಬಗ್ಗೆ ಮೇ 1ರ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಮತ್ತೊಂದೆಡೆ, ಗ್ರಾಮೀಣ ಭಾಗಗಳಲ್ಲಿ ಸಮಸ್ಯಾತ್ಮಕ ಗ್ರಾಮಗಳ ಸಂಖ್ಯೆ ಹೆಚ್ಚಾಗುತ್ತಿದೆ. 155 ಗ್ರಾಮ ಪಂಚಾಯಿತಿಗಳ ಪೈಕಿ ಬ್ರಹ್ಮಾವರ ತಾಲ್ಲೂಕಿನ 25, ಕಾಪು ತಾಲ್ಲೂಕಿನ 10, ಉಡುಪಿ ತಾಲ್ಲೂಕಿನ 12, ಹೆಬ್ರಿ ತಾಲ್ಲೂಕಿನ 9, ಕಾರ್ಕಳ ತಾಲ್ಲೂಕಿನ 21, ಬೈಂದೂರು ತಾಲ್ಲೂಕಿನ 15 ಗ್ರಾಮ ಪಂಚಾಯಿತಿಗಳ 200ಕ್ಕೂ ಹೆಚ್ಚು ಸಮಸ್ಯಾತ್ಮಕ ಗ್ರಾಮಗಳನ್ನು ಜಿಲ್ಲಾಡಳಿತ ಗುರುತಿದೆ.

ಸದ್ಯ ಬ್ರಹ್ಮಾವರ ತಾಲ್ಲೂಕಿನ ಕರ್ಜೆ, ಕೊಕ್ಕರ್ಣೆ ಪಂಚಾಯಿತಿಗಳ ಕೆಲವು ಗ್ರಾಮಗಳಲ್ಲಿ ಸಮಸ್ಯೆ ಹೆಚ್ಚಾಗಿದ್ದು ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ ವಹಿಸಲಾಗಿದೆ. ಪ್ರತಿ ತಾಲ್ಲೂಕಿನಲ್ಲೂ ತಹಶೀಲ್ದಾರ್ ನೇತೃತ್ವದಲ್ಲಿ ಟಾಸ್ಕ್‌ ಫೋರ್ಸ್ ರಚಿಸಲಾಗಿದ್ದು ನೀರಿನ ಸಮಸ್ಯೆ ಕಂಡುಬರುವ ಗ್ರಾಮಗಳಲ್ಲಿ ಕೂಡಲೇ ಟ್ಯಾಂಕರ್ ನೀರು ಪೂರೈಸುವಂತೆ ಸೂಚಿಸಲಾಗಿದೆ. ತಹಶೀಲ್ದಾರ್‌ಗಳಿಂದ ಸಲ್ಲಿಕೆಯಾಗುವ ಎಲ್ಲ ಪ್ರಸ್ತಾವಗಳನ್ನು ತುರ್ತು ವಿಲೇವಾರಿ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ತಿಳಿಸಿದರು.

ಪುರಸಭೆ ವ್ಯಾಪ್ತಿಯಲ್ಲಿ ಮೊದಲು ದಿನಕ್ಕೆ ಒಂದು ಬಾರಿ ನೀರನ್ನು ಒದಗಿಸಲಾಗುತ್ತಿತ್ತು. ಇದೀಗ ಎರಡು ದಿನಗಳಿಗೊಮ್ಮೆ ನೀರು ಹರಿಸಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂಡ್ಲಿ ಜಲಾಶಯದ ನೀರು ಈ ತಿಂಗಳ ಅಂತ್ಯದ ತನಕ ಸಾಕಾಗುತ್ತದೆ. ಆದರೆ ಪುರಸಭಾ ಆಡಳಿತಕ್ಕೆ ಮಳೆಯ ಮೇಲೆ ನಂಬಿಕೆಯಿದೆ.

ಜೊತೆಗೆ ರಾಮ ಸಮುದ್ರದಲ್ಲಿ ಸಾಕಷ್ಟು ನೀರಿರುವುದರಿಂದ ಅದನ್ನು ಉಪಯೋಗಿಸಿಕೊಳ್ಳುವ ಯೋಜನೆಯೂ ಪುರಸಭೆಗಿದೆ. ಮುಂಡ್ಲಿ ಜಲಾಶಯದಲ್ಲಿ ಸಂಗ್ರಹವಾಗುವ ನೀರನ್ನು ರಾಮಸಮುದ್ರ ಸಂಪುವಿಗೆ ಹಾಯಿಸಿ, ಬಳಿಕ ಅಲ್ಲಿ ಶುದ್ದೀಕರಿಸಿ ಕಾರ್ಕಳದ ಸುಮಾರು 23 ವಾರ್ಡ್‌ಗಳಿಗೆ ನಿತ್ಯ ನೀರು ಪೂರೈಕೆ ಮಾಡಲಾಗುತ್ತದೆ.

ಕಾರ್ಕಳ ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡಿರುವ 12 ಗ್ರಾಮ ಹಾಗೂ ಪುರಸಭೆ ವ್ಯಾಪ್ತಿಯ 13 ವಾರ್ಡ್‌ಗಳನ್ನು ಗುರುತಿಸಲಾಗಿದೆ. ತಾಲ್ಲೂಕಿನಾದ್ಯಂತ ಖಾಸಗಿ ಬೋರ್‌ವೆಲ್‌ ಹಾಗೂ ಬಾವಿಗಳನ್ನು ತಾತ್ಕಾಲಿಕ ನೆಲೆಯಲ್ಲಿ ಬಳಸಿಕೊಂಡು ಟ್ಯಾಂಕ್‌ಗಳಿಗೆ ತುಂಬಿಸಿ ಸಾರ್ವಜನಿಕರಿಗೆ ಸರಬರಾಜು ಮಾಡಲು ಚಿಂತಿಸಲಾಗಿದೆ. ನದಿ ತೀರದಲ್ಲಿ ಕಿಂಡಿ ಅಣೆಕಟ್ಟುಗಳ ಬಾಗಿಲುಗಳ ಮೂಲಕ ನೀರು ಪೋಲಾಗದಂತೆ ಕ್ರಮ ವಹಿಸಲಾಗಿದೆ.

ನಗರಸಭೆಯಿಂದ ವ್ಯವಸ್ಥೆ
ಬಜೆ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿರುವುದರಿಂದ ಪ್ರತಿನಿತ್ಯ ನೀರು ಪೂರೈಕೆ ಅವಧಿಯನ್ನು 2 ತಾಸು ಕಡಿತಗೊಳಿಸಲಾಗಿದೆ. ನಗರಕ್ಕೆ ರೇಷನಿಂಗ್ ಪದ್ಧತಿಯಲ್ಲಿ ನೀರು ಬಿಡುವ ಬಗ್ಗೆ ಶೀಘ್ರ ನಿರ್ಧಾರ ತೆಗೆದುಕೊಳ್ಳಲಾಗುವುದು. ಕೆಟ್ಟಿದ್ದ 6 ಬೋರ್‌ವೆಲ್‌ ದುರಸ್ತಿಗೊಳಿಸಲಾಗಿದೆ. ನಗರಸಭೆ ಉಸ್ತುವಾರಿಯಲ್ಲಿ ಇದ್ದ ತೆರೆದ ಬಾವಿಗಳನ್ನು ಸ್ವಚ್ಛಗೊಳಿಸಲಾಗಿದೆ. ಹೊಸದಾಗಿ ಎರಡು ಕೊಳವೆಬಾವಿ ಕೊರೆಯಿಸಲಾಗಿದೆ. ಖಾಸಗಿ ಬಾವಿಗಳು ಹಾಗೂ ಬೋರ್‌ವೆಲ್‌ಗಳನ್ನು ಗುರುತಿಸಲಾಗಿದ್ದು ಅಗತ್ಯಬಿದ್ದರೆ ಬಳಸಿಕೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತ ರಾಯಪ್ಪ ತಿಳಿಸಿದರು.
‘ಸದ್ಯಕ್ಕೆ ಸಮಸ್ಯೆ ಇಲ್ಲ’: ಸದ್ಯಕ್ಕೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿಲ್ಲ. ಬ್ರಹ್ಮಾವರ ತಾಲ್ಲೂಕಿನ 3 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಉಡುಪಿ ನಗರದಲ್ಲಿ ಮೇ ಅಂತ್ಯದವರೆಗೂ ಸಮಸ್ಯೆ ತಲೆದೋರುವುದಿಲ್ಲ ಎಂಬ ವಿಶ್ವಾಸವಿದೆ. ಕುಡಿಯುವ ನೀರು ಪೂರೈಕೆಗೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಅನುದಾನದ ಕೊರತೆಯೂ ಇಲ್ಲ. ಸಮಸ್ಯೆ ಗಂಭೀರವಾದರೆ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ತಿಳಿಸಿದರು.
ನೀರಿನ ಕೊರತೆ ಇರುವ ಕಾರಣ ಜನರು ಮಿತವಾಗಿ ನೀರು ಬಳಸಬೇಕು. ಉದ್ಯಾನಕ್ಕೆ, ವಾಹನ ತೊಳೆಯಲು ಕುಡಿಯುವ ನೀರನ್ನು ಬಳಸಬೇಡಿ. ನೀರಿನ ಮಿತ ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
–ರೂಪಾ ಟಿ. ಶೆಟ್ಟಿ ಮುಖ್ಯಾಧಿಕಾರಿ, ಪುರಸಭೆ ಕಾರ್ಕಳ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT