ಕಾರವಾರ: ತಾಲ್ಲೂಕಿನ ವಿವಿಧೆಡೆ ಮಂಗಳವಾರ ಬೆಳಿಗ್ಗೆಯಿಂದ ಗುಡುಗು ಸಹಿತ ಜೋರಾಗಿ ಮಳೆ ಸುರಿಯುತ್ತಿದೆ. ಆಗಸದಲ್ಲಿ ದಟ್ಟವಾದ ಕಾರ್ಮೋಡ ಕವಿದಿದೆ.
ಬೆಳಿಗ್ಗೆಯಿಂದಲೂ ಜೋರಾಗಿ ಗಾಳಿ ಬೀಸುತ್ತಿತ್ತು. ಆಗಾಗ ಬಿಸಿಲು ಕಾಣಿಸಿಕೊಂಡು ಮರೆಯಾಗುತ್ತಿತ್ತು. ಸೋಮವಾರ ಸಂಜೆಯೂ ನಗರದಲ್ಲಿ ಉತ್ತಮ ಮಳೆಯಾಗಿದೆ.
ಉತ್ತರ ಕನ್ನಡದಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಈಗಾಗಲೇ ಶುರುವಾಗಿವೆ. ಭತ್ತದ ವ್ಯವಸಾಯ ಮಾಡುವವರು ಹೊಲಗಳನ್ನು ಉಳುಮೆ ಬಿತ್ತನೆಗೆ ಸಿದ್ಧತೆ ಆರಂಭಿಸಿದ್ದಾರೆ. ಅಡಿಕೆ ತೋಟಗಳಿಗೆ ಔಷಧ ಸಿಂಪಡಿಸಲು ಅಗತ್ಯವಾದ ಮೈಲುತುತ್ತ ಹಾಗೂ ಸುಣ್ಣವನ್ನು ಸಂಗ್ರಹಿಸಲು ಕೃಷಿಕರು ಮುಂದಾಗಿದ್ದಾರೆ.
ಈ ಬಾರಿ ಮುಂಗಾರು ವಾಡಿಕೆಯಂತೆ ಶುರುವಾಗಲಿದೆ ಮತ್ತು ಉತ್ತಮವಾಗಿ ಮಳೆ ಬೀಳಲಿದೆ ಎಂಬ ಮುನ್ಸೂಚನೆ ರೈತರ ಸಂತಸಕ್ಕೆ ಕಾರಣವಾಗಿದೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಗಂಟೆಗೆ ಗರಿಷ್ಠ 80 ಕಿಲೋಮೀಟರ್ ನಷ್ಟು ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಾಗಾಗಿ ಮೀನುಗಾರರು ಕಡಲಿಗೆ ಹೋಗಬಾರದು ಎಂದು ಎಚ್ಚರಿಕೆ ನೀಡಿದೆ.