ಕಾರವಾರ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ, ಸುಡುಮದ್ದು ಸಿಡಿಸುವುದು ಸಾಮಾನ್ಯ. ಆದರೆ, ಈ ಬಾರಿ ಕೊರೊನಾ ಕಾರಣದಿಂದ ಸಾರ್ವಜನಿಕರು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು, ಪಟಾಕಿ ಮಳಿಗೆಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಸುಳಿಯುತ್ತಿಲ್ಲ.
ಒಂದೆಡೆ ‘ಹಸಿರು ಪಟಾಕಿ’ಯ ಗೊಂದಲ ಉಂಟಾಗಿದ್ದು, ಮತ್ತೊಂದೆಡೆ ಗ್ರಾಹಕರ ಕೊರತೆ ಇದೆ. ಇವುಗಳ ನಡುವೆ ವರ್ತಕರು ವಹಿವಾಟು ಹೇಗೆ ಮಾಡುವುದು ಎಂಬ ಚಿಂತೆಗೀಡಾಗಿದ್ದಾರೆ. ಪ್ರತಿವರ್ಷ ಪಟಾಕಿ ವ್ಯಾಪಾರ ಮಾಡುವ ವರ್ತಕರು, ಹಸಿರು ಪಟಾಕಿಯ ಆದೇಶ ಬರುವ ಮೊದಲೇ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿದ್ದರು. ಆ ಹಣವನ್ನು ಹೇಗೆ ವಾಪಸ್ ಪಡೆಯುವುದು ಎಂಬ ಯೋಚನೆಯಲ್ಲಿದ್ದಾರೆ.
‘ಕೊರೊನಾ ಕಾರಣದಿಂದ ಈ ವರ್ಷ ಪಟಾಕಿಗೆ ಗಿರಾಕಿಗಳೇ ಇಲ್ಲ. ಕೆಲವರು ಬಂದರೂ ಗರಿಷ್ಠ ₹ 500ರೊಳಗೆ ವ್ಯಾಪಾರ ಮಾಡುತ್ತಿದ್ದಾರೆ. ಕಳೆದ ವರ್ಷ ಪ್ರವಾಹದಿಂದ ಜನರಿಗೆ ಸಮಸ್ಯೆಯಾಯಿತು. ಈ ಬಾರಿ ಸಾಂಕ್ರಾಮಿಕ ಸೋಂಕಿನಿಂದ ತೊಂದರೆಯಾಗಿದೆ’ ಎಂದು ಪಟಾಕಿ ಮಳಿಗೆ ತೆರೆದಿರುವ ಮನೋಜ ಭಟ್ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ನಗರದ ಮಿತ್ರ ಸಮಾಜ ಮೈದಾನದಲ್ಲಿ ಮೂರು ಮಳಿಗೆಗಳಿವೆ. ಹಲವು ಪಟಾಕಿಗಳ ಲಕೋಟೆಯಲ್ಲೇ ಪರಿಸರ ಮಾಲಿನ್ಯದ ಬಗ್ಗೆ ಜಾಗೃತಿಯ ಸಂದೇಶಗಳನ್ನು ಮುದ್ರಿಸಲಾಗಿದೆ. ಮಾಲಿನ್ಯ ತಡೆಯುವ ಬಗ್ಗೆಯೂ ತಿಳಿವಳಿಕೆ ನೀಡಲಾಗಿದೆ.
‘ಪಟಾಕಿಯೂ ದೀಪಾವಳಿ ಹಬ್ಬದ ಭಾಗವೇ ಆಗಿದೆ. ವರ್ಷಕ್ಕೊಮ್ಮೆ ಆಚರಿಸುವ ಬೆಳಕಿನ ಹಬ್ಬದಲ್ಲಿ ಸುಡುಮದ್ದುಗಳು ಇಲ್ಲದಿದ್ದರೆ ಅಪೂರ್ಣ ಎನಿಸುತ್ತದೆ. ಮನೆಯಲ್ಲಿರುವ ಮಕ್ಕಳೂ ಹಟ ಹಿಡಿದು ಪಟಾಕಿ ತರಿಸಿಕೊಳ್ಳುತ್ತಾರೆ. ಹಾಗಾಗಿ ಕಡಿಮೆ ಪ್ರಮಾಣದಲ್ಲಾದರೂ ಖರೀದಿಸುವುದು ಅನಿವಾರ್ಯವಾಗಿದೆ’ ಎನ್ನುತ್ತಾರೆ ಕೆ.ಎಚ್.ಬಿ. ನಿವಾಸಿ ನವೀನ ಭಟ್.