ಕಾರವಾರ: ‘ಬಿ.ಜೆ.ಪಿ.ಯವರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬಹಳ ಶಕ್ತಿಯಿದೆ. ಅವರು ಎಷ್ಟು ಬೇಕಾದರೂ ನಿಗಮಗಳು, ಯಾವ ಸಮಾಜಕ್ಕಾದರೂ ಸ್ಥಾನಮಾನಗಳನ್ನು ಕೊಡಬಹುದು’ ಎಂದು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಗಿ ಹೇಳಿದರು.
ಶಿರಸಿಯಲ್ಲಿ ಶನಿವಾರ ನಡೆಯಲಿರುವ ಪಕ್ಷದ ಸಭೆಯಲ್ಲಿ ಭಾಗವಹಿಸಲು ಶುಕ್ರವಾರ ಸಂಜೆ ಕಾರವಾರಕ್ಕೆ ಅವರು ಬಂದಾಗ ಸುದ್ದಿಗಾರರ ಜೊತೆ ಮಾತನಾಡಿದರು.
‘ಬಿ.ಜೆ.ಪಿ.ಯ ಕಾರ್ಯಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಅವರೇನು ಬೇಕಾದರೂ ಮಾಡಲಿ. ಅವರು ತಮ್ಮನ್ನು ತಾವು ಸರ್ವತಂತ್ರ ಸ್ವತಂತ್ರರು ಎಂದುಕೊಂಡಿದ್ದಾರೆ. ಅವರ ಬಳಿ ಅಧಿಕಾರವಿದೆ. ಅದೇನು ಮಾಡುತ್ತಾರೋ ಎಲ್ಲವನ್ನೂ ಮಾಡಲಿ, ನೋಡೋಣ’ ಎಂದು ಹೇಳಿದರು.
ಬಿ.ಜೆ.ಪಿ.ಯಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಮಾತುಗಳು ಕೇಳಿಬರುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಆ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ನನಗೇನೂ ಗೊತ್ತಿಲ್ಲ. ಆದರೆ, ಇಲ್ಲಿಂದ (ಬೇರೆ ಪಕ್ಷಗಳಿಂದ) ಹೋದ ಕೆಲವರು ಅವರಿಗೇನು ಉಡುಗೊರೆ ಕೊಡಬೇಕೋ ಅದನ್ನು ಕೊಡುತ್ತಾರೆ’ ಎಂದು ವ್ಯಂಗ್ಯವಾಡಿದರು.