ಕಾರವಾರ: ‘ಕಲಿಯುಗದ ಆವಿಷ್ಕಾರ ಹಾಗೂ ಋಷಿಯುಗದ ಸಾಕ್ಷಾತ್ಕಾರದ ಸಮನ್ವಯದಿಂದಷ್ಟೇ ಉತ್ತಮ ಸಮಾಜ ನಿರ್ಮಾಣ ಸಾಧ್ಯ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸಿ.ಇ.ಟಿ, ‘ನೀಟ್’, ಜೆ.ಇ.ಇ ಮತ್ತಿತರ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ಗೋಕರ್ಣದ ವಿಷ್ಣುಗುಪ್ತ ವಿಶ್ವವಿದ್ಯಾಪೀಠವು ಆರಂಭಿಸಿರುವ ಆನ್ಲೈನ್ ತರಬೇತಿ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಋಷಿಯುಗ, ನವಯುಗಗಳ ಸಮ್ಮಿಲನವನ್ನು ಯುವಕರಿಗೆ ಪರಿಚಯಿಸುವ ಉದ್ದೇಶದಿಂದಲೇ ಐದು ಗುರುಕುಲಗಳು ನಿರ್ಮಾಣವಾಗಿವೆ. ಮಕ್ಕಳು ಉತ್ತಮ ಆಧುನಿಕ ಶಿಕ್ಷಣ ಪಡೆಯುವ ಜತೆಗೆ ಸಂಸ್ಕಾರವಂತರಾಗಬೇಕು. ಜೀವನದಲ್ಲಿ ಎಂದಿಗೂ ಸೋಲಬಾರದು ಎನ್ನುವ ಕಾರಣಕ್ಕೆ ಜೀವನ ಶಿಕ್ಷಣವನ್ನೂ ಬೋಧಿಸಲಾಗುತ್ತಿದೆ’ ಎಂದು ಹೇಳಿದರು.
ವಿದ್ಯಾ ಪರಿಷತ್ ಉಪಾಧ್ಯಕ್ಷ ಡಾ.ಮರುವಳ ನಾರಾಯಣ ಭಟ್ ಸ್ವಾಗತಿಸಿದರು. ಶ್ರೀಶ ಬೈಪದವು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸುಬ್ರಾಯ ಹೆಗಡೆ ಮಾತನಾಡಿದರು. ಆರ್.ಹೆಗಡೆ ಇದ್ದರು.