ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಹಾಳಾದ ಆಹಾರ ಪದಾರ್ಥ ವಿಲೇವಾರಿಗೆ ಆಗ್ರಹ

Last Updated 7 ನವೆಂಬರ್ 2020, 12:54 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲಾ ಅಂಕಿತ ಅಧಿಕಾರಿಗಳ ಕಚೇರಿಯಲ್ಲಿ ಸಂಗ್ರಹಿಸಿ ಇಡಲಾಗಿರುವ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸ್ಥಳಾಂತರಿಸಬೇಕು ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಒತ್ತಾಯಿಸಿದ್ದಾರೆ.

ಈ ಬಗ್ಗೆ ತಹಶೀಲ್ದಾರ್‌ಗೆ ಪತ್ರ ಬರೆದು ಗಮನ ಸೆಳೆದಿರುವ ಅವರು, ಈ ಹಿಂದೆ ತಾಲ್ಲೂಕಿನ ಕೆಲವು ಭಾಗಗಳಲ್ಲಿ ನೆರೆ ಬಂದಾಗ ಶಾಸಕಿ ರೂಪಾಲಿ ನಾಯ್ಕ ಅವರು ಸಂತ್ರಸ್ತರಿಗೆ ಆಹಾರ ಸಾಮಗ್ರಿ ವಿತರಿಸಿದ್ದರು. ಆದರೆ, ಅವುಗಳಲ್ಲಿದ್ದ ಕೆಲವು ಪದಾರ್ಥಗಳ ಅವಧಿ ಮೀರಿದ್ದು, ಸೇವನೆಗೆ ಯೋಗ್ಯವಲ್ಲ ಎಂದು ಕೆಲವರು ಸ್ಥಳೀಯರು ಮತ್ತು ಪ್ರಮುಖರು ಆಕ್ಷೇಪ ವ್ಯಕ್ತಪಡಿಸಿದ್ದರು.

ಸ್ಥಳಕ್ಕೆ ಭೇಟಿ ನೀಡಿದ್ದ ಆಹಾರ ಗುಣಮಟ್ಟದ ಅಧಿಕಾರಿಗಳು, ಎಣ್ಣೆ ಮತ್ತು ತೊಗರಿಬೇಳೆಯನ್ನು ಪರೀಕ್ಷಿಸಿದ್ದರು. ಅದು ತಿನ್ನಲು ಯೋಗ್ಯವಾಗಿಲ್ಲ ಎಂದು ವರದಿ ನೀಡಿದ್ದಾಗಿ ಅಂಕಿತ ಅಧಿಕಾರಿಗಳು ತಿಳಿಸಿದ್ದರು. ಅವುಗಳನ್ನು ವಿತರಣೆ ಮಾಡಿದ ಜಾಗದಿಂದ ವಶಪಡಿಸಿಕೊಂಡು ತಂದು ಅಂಕಿತ ಅಧಿಕಾರಿಗಳ ಕಚೇರಿಯಲ್ಲಿ ಇಡಲಾಗಿತ್ತು. ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಇಟ್ಟಿರುವ ಪೆಟ್ಟಿಗೆಗಳನ್ನು ಇಲಿ, ಹೆಗ್ಗಣಗಳು ಹರಿದು ಹಾಕಿವೆ. ಇಡೀ ಕಚೇರಿಯಲ್ಲಿ ಗಬ್ಬು ವಾಸನೆ ಬರುತ್ತಿದೆ. ಇದರಿಂದ ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.

ಹಾಳಾಗಿರುವ ಆಹಾರ ಪದಾರ್ಥಗಳನ್ನು ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT