ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ನೋಡಲ್ ಅಧಿಕಾರಿಗಳ ನೇಮಕ

ಕೊರೊನಾ ವೈರಸ್ ಬಗ್ಗೆ ಜಿಲ್ಲೆಯಲ್ಲಿ ಕಟ್ಟೆಚ್ಚರ: ವಿವಿಧ ಸಭೆ, ಸಮಾರಂಭ ರದ್ದು
Last Updated 14 ಮಾರ್ಚ್ 2020, 13:08 IST
ಅಕ್ಷರ ಗಾತ್ರ

ಕಾರವಾರ: ಕೊರೊನಾ ವೈರಸ್ ಹರಡಬಹುದಾದ ಸಾಧ್ಯತೆಯ ಕಾರಣ ಜಿಲ್ಲೆಯಲ್ಲೂಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿದೆ. ಸಾಂಕ್ರಾಮಿಕ ಸೋಂಕಿನ ಬಗ್ಗೆಜಾಗೃತಿ ಮತ್ತು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ನೋಡಿಕೊಳ್ಳಲು ಆರು ಮಂದಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಆಯಾ ತಾಲ್ಲೂಕುಗಳಲ್ಲಿ ನಡೆಯುವ ಆರೋಗ್ಯ ಸಂಬಂಧಿಸಿದ ಎಲ್ಲ ಘಟನೆಗಳನ್ನು ಅವರ ಗಮನಕ್ಕೆ ತರಬೇಕು. ವಿಶೇಷವಾಗಿ ವೈರಸ್ ಕುರಿತು ನೋಡಲ್ ಅಧಿಕಾರಿಗಳಮಾರ್ಗದರ್ಶನದಲ್ಲಿಕ್ರಮ ವಹಿಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ.

ಭಾಗಶಃ ಪರಿಣಾಮ

ಶಾಲಾ ಕಾಲೇಜುಗಳಿಗೆ ಶನಿವಾರದಿಂದ ರಜೆ ನೀಡಲಾಗಿದೆ. ಜಿಲ್ಲೆಯ ನಿಸರ್ಗ ಧಾಮಗಳು, ಪ್ರವಾಸಿ ತಾಣಗಳನ್ನು ಕೂಡ ಮುಚ್ಚಲಾಗಿದೆ. ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಸಭೆ, ಸಮಾರಂಭಗಳು ರದ್ದಾಗಿವೆ.

ಕಾರವಾರದಲ್ಲಿ ಹೋಟೆಲ್, ಮಾರುಕಟ್ಟೆ ವ್ಯವಹಾರಗಳು, ಸರ್ಕಾರಿ ಕಚೇರಿಗಳಲ್ಲಿ ಎಂದಿನಂತೆ ಕೆಲಸ ಕಾರ್ಯಗಳು ನೆರವೇರಿದವು. ಉಳಿದಂತೆ ಸೂಪರ್ ಮಾರ್ಕೆಟ್‌ಗಳು ಬಾಗಿಲು ಮುಚ್ಚಿವೆ. ಶಾಲೆಗಳಿಗೆ ರಜೆ ನೀಡಿರುವ ಮಾಹಿತಿ ಇಲ್ಲದ ಪಾಲಕರು ಮಕ್ಕಳನ್ನು ಕರೆದುಕೊಂಡು ಬಂದಿದ್ದರು. ಎಷ್ಟನೇ ತರಗತಿಯ ಮಕ್ಕಳಿಗೆ ರಜೆ ನೀಡಲಾಗಿದೆ ಎಂದು ಭದ್ರತಾ ಸಿಬ್ಬಂದಿಯ ಜೊತೆ ವಿಚಾರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಪ್ರವಾಸಿಗರ ಸಂಖ್ಯೆ ಇಳಿಕೆ

ಪ್ರತಿ ವಾರಾಂತ್ಯದಲ್ಲಿ ಜನದಟ್ಟಣೆ ಕಾಣುವ ಗೋಕರ್ಣದಲ್ಲಿ ಭಕ್ತರು ಹಾಗೂ ಪ್ರವಾಸಿಗರ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದೆ. ಶನಿವಾರ ಬೆಳಿಗ್ಗೆ ಬೆಂಗಳೂರಿನಿಂದ ನಾಲ್ಕು ಬಸ್‌ಗಳಲ್ಲಿ ಪ್ರವಾಸಿಗರು ಬಂದಿದ್ದಾರೆ. ವಾಡಿಕೆಯಂತೆ ವಾರಾಂತ್ಯದಲ್ಲಿ ಸೇರುವ ವಿದೇಶಿ ಪ್ರವಾಸಿಗರು ಬೇರೆ ಊರುಗಳಿಂದ ಬಂದಿಲ್ಲ. ಗೋಕರ್ಣದಲ್ಲೇ ಇರುವವರು ಅಲ್ಲೇ ಉಳಿದುಕೊಂಡಿದ್ದಾರೆ.

ಮುರ್ಡೇಶ್ವರ ಸಮೀಪದ ನೇತ್ರಾಣಿ ನಡುಗಡ್ಡೆಯಲ್ಲಿ ಸ್ಕೂಬಾ ಡೈವಿಂಗ್ ಮಾಡಲೂ‍ಪ್ರವಾಸಿಗರು ಹಿಂದೇಟು ಹಾಕುತ್ತಿದ್ದಾರೆ. ಕೆಲವು ದಿನಗಳಿಂದ ಅಲ್ಲಿ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ.

ನಿಸರ್ಗ ಧಾಮಬಂದ್

ದಾಂಡೇಲಿ ಸುತ್ತಮುತ್ತಲಿನಕಾಳಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಬರುವ ನಿಸರ್ಗಧಾಮ, ಪ್ರವಾಸಿ ತಾಣಗಳನ್ನೂ ಸ್ಥಗಿತಗೊಳಿಸಿ ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಕುಳಗಿ ಪ್ರಕೃತಿ ಶಿಕ್ಷಣ ಶಿಬಿರ, ಅಣಶಿ ಪ್ರಕೃತಿ ಶಿಬಿರ, ಕ್ಯಾಸಲ್‌ರಾಕ್ ಶಿಕ್ಷಣ ಶಿಬಿರಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಜಂಗಲ್ ಸಫಾರಿ, ಅತ್ತಿವೇರಿ ಪಕ್ಷಿಧಾಮ, ಸಿಂತೇರಿ ರಾಕ್ಸ್ ಸೇರಿದಂತೆ ಎಲ್ಲ ಪ್ರವಾಸಿ ತಾಣಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ಹಳಿಯಾಳ ಉಪ ವಿಭಾಗ ವ್ಯಾಪ್ತಿಯಲ್ಲಿ ಬರುವ ದಾಂಡೇಲಿಯ ದಂಡಕಾರಣ್ಯ, ಇಕೊಪಾರ್ಕ್, ಮೌಳಂಗಿ ಇಕೊ ಪಾರ್ಕ್‌ಗಳನ್ನೂ ಶನಿವಾರದಿಂದಲೇಸ್ಥಗಿತಗೊಳಿಸಲಾಗಿದೆ.

ಸಂತೆ ಸಂಜೆ 6ಕ್ಕೆ ಮುಕ್ತಾಯ

ಕಾರವಾರದಲ್ಲಿ ಪ್ರತಿ ಭಾನುವಾರ ನಡೆಯುವ ಸಂತೆಯ ಮೇಲೂ ಕೊರೊನಾ ಪ್ರಭಾವ ಬೀರಿದೆ. ಸಂತೆಗೆ ಷರತ್ತು ಬದ್ಧ ಅನುಮತಿ ನೀಡಲಾಗಿದ್ದು, ಸಂಜೆ 6ಕ್ಕೆ ಕೊನೆಗೊಳ್ಳಲಿದೆ.

‘ನಗರಸಭೆಯು ಸಂತೆಯ ಪ್ರದೇಶದಲ್ಲೇ ಹೆಲ್ಪ್ ಡೆಸ್ಕ್ ತೆರೆಯಲಿದ್ದು, ಕೊರೊನಾ ಕುರಿತು ಜಾಗೃತಿ ಮೂಡಿಸಲಿದೆ. ಸಂತೆಯಲ್ಲಿ ಹೆಚ್ಚು ಹೊತ್ತು ಕಾಲಕಳೆಯದೇ ತಕ್ಷಣವೇತರಕಾರಿ ಖರೀದಿ ಮಾಡಿ ಮನೆಗಳಿಗೆ ಮರಳುವಂತೆ ನಾಗರಿಕರಿಗೆ ಸೂಚಿಸಲಾಗಿದೆ. ಅಲ್ಲದೇ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸುವ ಪ್ರಕಟಣೆಗಳನ್ನು ಸಾರುವ ವಾಹನವೊಂದು ನಗರದಲ್ಲಿ ಸಂಚರಿಸಲಿದೆ’ ಎಂದು ಸಹಾಯಕ ಎಂಜಿನಿಯರ್ ಆರ್.ಪಿ.ನಾಯ್ಕ ತಿಳಿಸಿದ್ದಾರೆ.

ನೋಡಲ್ ಅಧಿಕಾರಿಗಳು

ವೈದ್ಯಾಧಿಕಾರಿಗಳು;ಮೊಬೈಲ್;ನಿಯೋಜಿತ ತಾಲ್ಲೂಕು

ಡಾ.ಶರದ ನಾಯಕ;94498 43212;ಹೊನ್ನಾವರ, ಭಟ್ಕಳ

ಡಾ.ರಮೇಶ ರಾವ್;94802 96849;ಕುಮಟಾ, ಅಂಕೋಲಾ

ಡಾ.ಅನ್ನಪೂರ್ಣಾ ವಸ್ತ್ರದ;94496 29804;ಹಳಿಯಾಳ, ಜೊಯಿಡಾ

ಡಾ.ವಿನೋದ ಭೂತೆ;83103 96901;ಕಾರವಾರ

ಡಾ.ಮಹಾಬಲೇಶ್ವರ ಹೆಗಡೆ;94489 65434;ಯಲ್ಲಾಪುರ, ಮುಂಡಗೋಡ

ಬಸವರಾಜ ಎಸ್.ಕನ್ನಕ್ಕನವರ್;98451 98326;ಸಿದ್ದಾಪುರ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT