ರಾಜ್ಯದ ಕರಾವಳಿಯಲ್ಲಿ ಮೇ 15ರಂದು ಹಾದು ಹೋಗಿದ್ದ ‘ತೌತೆ’ ಚಂಡಮಾರುತದ ಪರಿಣಾಮಗಳು ಈಗಲೂ ಮುಂದುವರಿದಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹತ್ತಾರು ಹೆಕ್ಟೇರ್ಗಳಷ್ಟು ಪ್ರದೇಶದಲ್ಲಿ ಕಲ್ಲಂಗಡಿ ಹಣ್ಣು ಗದ್ದೆಯಲ್ಲೇ ಕೊಳೆಯುತ್ತಿವೆ. ಫಸಲು ಇನ್ನೇನು ಕಟಾವಾಗಿ ಕೈ ಸೇರುವ ದಿನವಾಯ್ತು ಎನ್ನುವಷ್ಟರಲ್ಲಿ ಚಂಡಮಾರುತ ಅಬ್ಬರಿಸಿತು. ಸಮೀಪದಲ್ಲಿರುವ ಸಮುದ್ರದ ಉಪ್ಪು ನೀರು ಮರಳು ಮಿಶ್ರಿತ ಮಣ್ಣಿನ ಮೂಲಕ ಗದ್ದೆಗೂ ಬಂತು. ಇದರಿಂದ ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿ ಕಲ್ಲಂಗಡಿ ಕೃಷಿಗೆ ಮಾರಕವಾಯಿತು.