ಹೊಸಪೇಟೆ (ವಿಜಯನಗರ): ತಾಲ್ಲೂಕಿನಲ್ಲಿ ಬುಧವಾರ ರಾತ್ರಿ ಭಾರಿ ಗಾಳಿ ಜೊತೆ ಸಾಧಾರಣ ಮಳೆಯಾಗಿದೆ. ಗಾಳಿಯಿಂದ ಹಂಪಿ ಸಮೀಪದ ಬುಕ್ಕಸಾಗರದಲ್ಲಿ 120 ಎಕರೆ ಪ್ರದೇಶದಲ್ಲಿ ಬಾಳೆತೋಟ ನಾಶವಾಗಿದೆ.
ಬುಕ್ಕಸಾಗರದ ಹನುಮಂತಪ್ಪ, ಜೆ.ಎನ್.ಕಾಳಿದಾಸ ಸೇರಿ ಸುಮಾರು 100 ಮಂದಿ ಕೃಷಿಕರ ತೋಟಗಳಿಗೆ ಹಾನಿ ಆಗಿದೆ. ಕಡ್ಡಿರಾಂಪುರ, ವೆಂಕಟಾಪುರ, ಕಮಲಾಪುರ ಭಾಗದಲ್ಲೂ ಬಾಳೆತೋಟಗಳಿಗೆ ಭಾಗಶಃ ಹಾನಿಯಾಗಿದೆ.
‘₹70 ಲಕ್ಷದವರೆಗೆ ಹಾನಿ ಆಗಿರಬಹುದು. ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ನೀಡಲಾಗುವುದು’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಚಿದಾನಂದ ‘ಪ್ರಜಾವಾಣಿ’ಗೆ ತಿಳಿಸಿದರು. ಕಮಲಾಪುರದಲ್ಲಿ 4.3 ಸೆಂ.ಮೀ, ಹೊಸಪೇಟೆಯಲ್ಲಿ 1.4 ಸೆಂ.ಮೀ ಮಳೆಯಾಗಿದೆ.
ಹೊಸಪೇಟೆ ತಾಲ್ಲೂಕಿನ ಬುಕ್ಕಸಾಗರದಲ್ಲಿ ಗಾಳಿಗೆ ಬಾಳೆಗಿಡಗಳು ಮುರಿದು ಬಿದ್ದಿರುವುದು –ಪ್ರಜಾವಾಣಿ ಚಿತ್ರ