ಕೊಟ್ಟೂರು: ಹನಿ ನೀರಾವರಿ ಪದ್ಧತಿಯಿಂದಲೂ ಅಧಿಕ ಇಳುವರಿ ಪಡೆಯಬಹುದು ಎಂದು ತಾಲ್ಲೂಕಿನ ರೈತರಲ್ಲಿ ಆಸಕ್ತಿ ಮೂಡಿರುವುದರಿಂದ ಪ್ರಧಾನ ಮಂತ್ರಿ ಕೃಷಿ ಸಿಂಚನ ಯೋಜನೆ ಪರಿಕರಗಳನ್ನು ಬಹುತೇಕ ರೈತರು ಖರೀದಿಸಲು ರೈತ ಸಂಪರ್ಕ ಕೇಂದ್ರದಲ್ಲಿ ನೆರೆದಿದ್ದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ 2015-16 ರಲ್ಲಿ ‘ಪರ್ ಡ್ರಾಪ್ ಮೋರ್ ಕ್ರಾಪ್’ ಎಂಬ ತತ್ವದಡಿ ರೈತರ ಅಭಿವೃದ್ಧಿಗಾಗಿ ಈ ಯೋಜನೆಯನ್ನು ಜಾರಿಗೊಳಿಸಿತ್ತು.
ಕೊಳವೆಬಾವಿ ಅವಲಂಬಿಸಿರುವ ರೈತರು ಕೇವಲ 1876 ರೂ.ಗಳನ್ನು ಕೃಷಿ ಇಲಾಖೆಗೆ ಪಾವತಿಸಿದರೆ 30 ಪೈಪ್ ಗಳು. 5 ಜೆಟ್ಸ್. 5 ಸ್ಪ್ರಿಂಕ್ಲರ್ ಗಳನ್ನು ನೀಡಲಾಗುತ್ತದೆ.
ಕೊಳವೆ ಬಾವಿಯ ಕಡಿಮೆ ನೀರಿನಿಂದಲೂ ಸಹ ಪೈಪ್ಗಳಿಗೆ ಜೆಟ್ಸ್ ಮತ್ತು ಸ್ಪ್ರಿಂಕ್ಲರ್ ಅಳವಡಿಸಿದರೆ ಮಳೆ ನೀರಿನಂತೆಯೇ ನೀರು ತುಂತುರು ಹನಿಗಳಾಗಿ ಬೀಳುವುದರಿಂದ ನೀರು ಪೋಲಾಗದೆ ಹೆಚ್ಚಿನ ಭೂಮಿಗೆ ಹನಿನೀರು ಹಾಯಿಸಲು ಸಹಕಾರಿಯಾಗುತ್ತದೆ.
ರೈತ ಸಂಪರ್ಕ ಕೇಂದ್ರಕ್ಕೆ ಕಳೆದ ವರ್ಷ 240 ಅರ್ಜಿಗಳು ಬಂದಿದ್ದವು. ಇವುಗಳಲ್ಲಿ 208 ರೈತರಿಗೆ ಪೈಪ್, ಜೆಟ್ಸ್ ಹಾಗೂ ಸ್ಪ್ರಿಂಕ್ಲರ್ಗಳನ್ನು ಪೂರೈಸಿದ್ದು, 32 ರೈತರಿಗೆ ಅನುದಾನದ ಕೊರತೆಯಿಂದ ಪರಿಕರಗಳನ್ನು ಸರಬರಾಜು ಆಗಿಲ್ಲ ಎಂದು ಕೃಷಿ ಅಧಿಕಾರಿ ತಿಳಿಸಿದರು.
ಈ ಯೋಜನೆಗೆ ಸರ್ಕಾರದಿಂದ ಶೇ90 ಅನುದಾನ ನೀಡುತ್ತಿದ್ದು ಶೇ10 ರಷ್ಟು ಹಣ ಮಾತ್ರ ರೈತರು ಸಂದಾಯ ಮಾಡಬೇಕು. ಪ್ರಸಕ್ತ ಸಾಲಿನಲ್ಲಿ ಈ ಯೋಜನೆಯ ಕೃಷಿ ಪರಿಕರಗಳ ಪೂರೈಕೆಗೆ ಸರ್ಕಾರ ಇದುವರೆಗೂ ಟೆಂಡರ್ ಕರೆದಿಲ್ಲ. ರೈತ ಸಂಪರ್ಕ ಕೇಂದ್ರಕ್ಕೆ ಈಗಾಗಲೇ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿರುವುದನ್ನು ನೋಡಿದರೆ ಕಡಿಮೆ ನೀರಿನಲ್ಲಿ ಸಿಂಚನದ ಮೂಲಕ ಬೆಳೆ ಬೆಳೆಯಲು ಉತ್ಸಾಹ ತೋರುತ್ತಿರುವುದು ಕಂಡುಬರುತ್ತದೆ.
ಸಿಂಚನ ನೀರಾವರಿ ಯೋಜನೆ ರೈತರಿಗೆ ಹೆಚ್ಚು ಅನುಕೂಲವಿದ್ದು ಕಡಿಮೆ ವೆಚ್ಚ ಹಾಗೂ ನಿರ್ವಹಣೆ ಸುಲಭವಾಗಿರುವುದರಿಂದ ಕಡಿಮೆ ನೀರಿನಲ್ಲಿ ಹೆಚ್ಚಿನ ಭೂಮಿಗೆ ನೀರು ಉಣಿಸಬಹುದಲ್ಲದೆ ಭೂ ಸವಕಳಿ ಕಡಿಮೆಯಾಗುತ್ತದೆ. ಈ ಸಿಂಚನ ಯೋಜನೆ ರೈತರಿಗೆ ಹೆಚ್ಚು ಅನುಕೂಲವಾಗಿದೆ ಎಂದು ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಡಿ.ಶ್ಯಾಮಸುಂದರ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.