ಹರಪನಹಳ್ಳಿ (ವಿಜಯನಗರ ಜಿಲ್ಲೆ): ಚಲಿಸುತ್ತಿದ್ದ ಕಾರು ಅಡ್ಡಗಟ್ಟಿ, ಹಲ್ಲೆ ನಡೆಸಿ, ₹ 46 ಲಕ್ಷ ನಗದು ಹಾಗೂ ಕಾರು ಸಮೇತ ಪರಾರಿಯಾಗಿರುವ ಘಟನೆ ಹರಪನಹಳ್ಳಿ ಘಟನೆ ಸಮೀಪ ಇದೇ 15ರಂದು ನಡೆದಿದೆ.
ಸುನೀಲ್ ರಾಯ್ಕರ್, ಮಹೇಶ್, ವಿಜಯ್ ಎನ್. ಅಣ್ವೇಕರ್ ಅವರು ಹಲ್ಲೆಗೆ ಒಳಗಾಗಿ, ಹಣ, ಕಾರು, ಮೊಬೈಲ್ ಕಳೆದುಕೊಂಡವರು. ಗಂಗಾವತಿಯ ಮೂಲದ ಇವರು ಗೋಲ್ಡ್ ಟೆಸ್ಟಿಂಗ್ ಕೆಲಸ ಮಾಡಿಕೊಂಡಿದ್ದಾರೆ. ತಮ್ಮ ಅಂಗಡಿಯ ಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದಿಂದ ರಿಪೇರಿ ಮಾಡಿಸಲು ತಮ್ಮ ಕೆಎ 37, ಎನ್ 6379 ನಂಬರಿನ ಕಾರಿನಲ್ಲಿ ಹರಪನಹಳ್ಳಿ ಮಾರ್ಗವಾಗಿ ಪ್ರಯಾಣ ಬೆಳೆಸಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇವರನ್ನೇ ಹಿಂಬಾಲಿಸಿ ಬಂದ ಮತ್ತೊಂದು ಕಾರು ಕಂಭಟ್ರಹಳ್ಳಿ ಸಬ್ ಜೈಲ್ ಬಳಿ ಮಧ್ಯರಾತ್ರಿ 1.30ಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆಯಿತು. ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ 4 ಜನ ಅಪರಿಚಿತರು ಮೂರು ಜನರ ಮೇಲೆ ಹಲ್ಲೆ ನಡೆಸಿ ಕಾರಿನಲ್ಲಿದ್ದ ನಗದು ₹ 46 ಲಕ್ಷ, ₹ 20 ಸಾವಿರ ಮೌಲ್ಯದ ಎರಡು ಮೊಬೈಲ್, ₹ 9 ಲಕ್ಷ ಮೌಲ್ಯದ ಕಾರು ಸಮೇತ ದರೋಡೆ ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯ್ ಎನ್. ಅಣ್ವೇಕರ್ ಅವರು ನೀಡಿದ ದೂರಿನ ಮೇರೆಗೆ ತನಿಖಾ ತಂಡಗಳನ್ನು ರಚಿಸಿರುವ ಪೊಲೀಸರು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.