ಹೊಸಪೇಟೆ (ವಿಜಯನಗರ):ನಟ ಪುನೀತ್ ರಾಜಕುಮಾರ್ ನಿಧನದ ಹಿನ್ನಲೆಯಲ್ಲಿ ನಗರದ ತಹಶೀಲ್ದಾರ್ ಕಚೇರಿ ಬಳಿ ಶುಕ್ರವಾರ ರಾತ್ರಿ ಬ್ಲಾಕ್ ಕಾಂಗ್ರೆಸ್ನಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪುನೀತ್ ಪರ ಜೈಘೋಷ ಹಾಕಿದ ಕಾಂಗ್ರೆಸ್ ಕಾರ್ಯಕರ್ತರು, ಮೇಣದ ಬತ್ತಿ ಬೆಳಗಿಸಿ, ಎರಡು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎನ್.ಮೊಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ‘ಚಿತ್ರನಟ ಪುನೀತ್ ಅವರು ಅವರ ತಂದೆಯ ಹಾದಿಯಲ್ಲಿ ಮುನ್ನಡೆದು ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ. ನಟನೆ ಅಷ್ಟೇ ಅಲ್ಲ, ಸಾಮಾಜಿಕ ಕಾಳಜಿ ಕೂಡ ಹೊಂದಿದ್ದರು. ಸಣ್ಣ ವಯಸ್ಸಿನಲ್ಲಿ ಅವರ ನಿಧನ ತುಂಬಲಾರದ ನಷ್ಟ’ ಎಂದು ಹೇಳಿದರು.
ಕಮಲಾಪುರ ಸಮಿತಿ ಅಧ್ಯಕ್ಷ ವಿ.ಸೋಮಪ್ಪ, ಮುಖಂಡರಾದ ಗುಜ್ಜಲ ನಾಗರಾಜ್, ಕೆ.ಗೌಸ್, ಸಿ.ಎನ್.ಭರತ್ ಕುಮಾರ್, ಮಾಭಾಷ, ಲಕ್ಷ್ಮಿ ಇದ್ದರು.