ಹೊಸಪೇಟೆ (ವಿಜಯನಗರ): ಕಾವಿ ಧರಿಸಿದ ನೂರಾರು ಹನುಮ ಮಾಲಾಧಾರಿಗಳಿಂದ ಶನಿವಾರ ಸಂಜೆ ನಗರದಲ್ಲಿ ಸಂಕೀರ್ತನಾ ಯಾತ್ರೆ ನಡೆಯಿತು.
ಸಂಜೆ ನಗರದ ವಡಕರಾಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು. ಅನಂತರ ಹನುಮಂತನ ಭಾವಚಿತ್ರವಿರುವ ಕೇಸರಿ ಧ್ವಜಗಳೊಂದಿಗೆ ಮೇನ್ ಬಜಾರ್, ದೊಡ್ಡ ಮಸೀದಿ, ಮದಕರಿ ನಾಯಕ ವೃತ್ತ, ವಾಲ್ಮೀಕಿ ವೃತ್ತದ ಮೂಲಕ ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನದ ವರೆಗೆ ಮೆರವಣಿಗೆ ನಡೆಸಿದರು.
ಸೋಮವಾರ (ಡಿ.5) ಅಂಜನಾದ್ರಿಯಲ್ಲಿ ಮಾಲೆ ವಿಸರ್ಜಿಸುವುದರ ಮೂಲಕ ವ್ರತ ಪೂರ್ಣಗೊಳಿಸುವರು. ವಿಶ್ವ ಹಿಂದೂ ಪರಿಷತ್, ಬಜರಂಗ ದಳದ ಸಹಭಾಗಿತ್ವದಲ್ಲಿ ಸಂಕೀರ್ತನಾ ಯಾತ್ರೆ ಆಯೋಜಿಸಲಾಗಿತ್ತು. ಯಾತ್ರೆಯ ಮಾರ್ಗದುದ್ದಕ್ಕೂ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.