ವಿಜಯಪುರ: ಆಲಮಟ್ಟಿ ಜಲಾಶಯಕ್ಕೆ ಶುಕ್ರವಾರ ಒಳಹರಿವಿನಲ್ಲಿ ಏರಿಕೆಯಾಗಿದ್ದರಿಂದ ಜಲಾಶಯದ ಎಲ್ಲಾ 26 ಗೇಟ್ಗಳ ಮೂಲಕ ಹಾಗೂ ಆಲಮಟ್ಟಿ ವಿದ್ಯುತ್ ಉತ್ಪಾದನಾ ಕೇಂದ್ರದ ಮೂಲಕ 1.50 ಲಕ್ಷ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೃಷ್ಣಾ ಕಣಿವೆಯಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಒಳಹರಿವು ಹೆಚ್ಚಿದೆ. ಗುರುವಾರ ಒಂದು ಲಕ್ಷ ಕ್ಯುಸೆಕ್ ಇದ್ದ ಒಳಹರಿವು ಶುಕ್ರವಾರ 1,26,374 ಕ್ಯುಸೆಕ್ಗೆ ಏರಿಕೆಯಾಗಿದೆ.
ಇದಕ್ಕೂ ಹೆಚ್ಚಿನ ಪ್ರಮಾಣದಲ್ಲಿ ನಾರಾಯಣಪುರ ಜಲಾಶಯದಿಂದಲೂ ನೀರು ಬಿಡಲಾಗುತ್ತಿದೆ. ಆಲಮಟ್ಟಿ ಜಲಾಶಯದ ಮುಂಭಾಗದಲ್ಲಿ ಸದ್ಯಕ್ಕೆ ಪ್ರವಾಹದ ಸ್ಥಿತಿಯಿಲ್ಲ ಎಂದು ಕೆಬಿಜೆಎನ್ಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಗೇಟ್ಗಳನ್ನು ಮುಚ್ಚಿದ್ದರೆ ಜಲಾಶಯ ಗುರುವಾರವೇ ಭರ್ತಿಯಾಗುತ್ತಿತ್ತು. ಆದರೆ ಪ್ರವಾಹದ ಮುನ್ಸೂಚನೆ ಹಿನ್ನಲೆಯಲ್ಲಿ ಹೆಚ್ಚು ನೀರನ್ನು ಬಿಡಲಾಗುತ್ತಿದೆ. ಕಳೆದ ನಾಲ್ಕು ದಿನಗಳಿಂದ ಮಹಾರಾಷ್ಟ್ರದಲ್ಲಿದ್ದ ಮಳೆಯ ಅಬ್ಬರ ಶುಕ್ರವಾರ ಅಲ್ಪ ತಗ್ಗಿದೆ ಎಂದು ಮೂಲಗಳು ತಿಳಿಸಿವೆ.
519.60 ಮೀ ಗರಿಷ್ಠ ಸಂಗ್ರಹ ಸಾಮರ್ಥ್ಯ ದ ಜಲಾಶಯದಲ್ಲಿ ಸದ್ಯ 517.96 ಮೀ. ವರೆಗೆ ನೀರು ಸಂಗ್ರಹವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.