ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನೆ ಮೊಸರಿನ ನಾಡಲ್ಲಿ ಪಶುವೈದ್ಯರ ಕೊರತೆ !

ಇನ್ನೂ ಆರಂಭವಾಗದ ‘ಪಶು ಸಂಜೀವಿನಿ’ ಅಂಬುಲೆನ್ಸ್‌
Last Updated 3 ಸೆಪ್ಟೆಂಬರ್ 2022, 13:04 IST
ಅಕ್ಷರ ಗಾತ್ರ

ವಿಜಯಪುರ: ‘ಕೊಲ್ಹಾರ ಕೆನೆ ಮೊಸರಿ‘ನಿಂದ ನಾಡಿನಾದ್ಯಂತ ಪ್ರಖ್ಯಾತವಾದ ಕೃಷ್ಣಾ, ಭೀಮಾ ನದಿಗಳ ತೀರವಾದ ವಿಜಯಪುರ ಜಿಲ್ಲೆ ಮೊದಲಿನಿಂದಲೂ ಹೈನುಗಾರಿಕೆಗೆ ಪ್ರಸಿದ್ಧ. ಇಲ್ಲಿಯ ಗಟ್ಟಿ ಮೊಸರು, ಹಾಲು, ತುಪ್ಪ ಜನರ ಬಾಯಲ್ಲಿ ನೀರೂರಿಸುತ್ತದೆ.ಜೊತೆಗೆಕುರಿ, ಮೇಕೆ ಸಾಕಾಣಿಕೆಗೂ ಜಿಲ್ಲೆ ಪ್ರಖ್ಯಾತಿ.

ದಶಕದ ಈಚೆಗೆ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹೈನೋದ್ಯಮ(ಡೇರಿ) ಬೆಳೆಯತೊಡಗಿದ್ದು, ಕಿಲಾರಿ ಆಕಳು, ಮುರ್ರಾ ಎಮ್ಮೆ, ಎಚ್‌ಎಫ್‌ ತಳಿಯ ಎಮ್ಮೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಾಕತೊಡಗಿದ್ದಾರೆ. ಈ ಮೂಲಕ ಸಹಸ್ರಾರು ಜನರಿಗೆ ಸ್ವಯಂ ಉದ್ಯೋಗ ಲಭಿಸಿದೆ. ಪಶು ಸಂಗೋಪನೆ ಜಿಲ್ಲೆಯ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುತ್ತಿದೆ.

ಜಿಲ್ಲೆಯಲ್ಲಿ 3,47,070 ದೊಡ್ಡ ಜಾನುವಾರು(ಆಕಳು, ಎತ್ತು,ಎಮ್ಮೆ, ಕೋಣ, ಹೋರಿ), 5,69,098 ಮೇಕೆ, 3,47,070 ಆಡು, 19,462 ಹಂದಿ, 42,372 ನಾಯಿಗಳು, 2,56,590 ಕೋಳಿ, 10 ಕತ್ತೆ, 1418 ಕುದುರೆ, 322 ಬಾತುಕೋಳಿ, 310 ಮೊಲಗಳನ್ನು ಸಾಕಲಾಗಿದೆ.

ಪಶು ಸಂಗೋಪನೆಗೆ ಅತ್ಯಗತ್ಯವಾಗಿ ಬೇಕಾದ ವೈದ್ಯಕೀಯ ಸೌಲಭ್ಯದ ಕೊರತೆ ಜಿಲ್ಲೆಯಲ್ಲಿ ಎದ್ದು ಕಾಣುತ್ತಿದೆ. ಪರಿಣಾಮ ಕಾಲು, ಬಾಯಿ ರೋಗಕ್ಕೆ ಲಸಿಕೆ, ಕೃತಕ ಗರ್ಭಧಾರಣೆ ಹಾಗೂ ಮತ್ತಿತರ ಸಂದರ್ಭದಲ್ಲಿ ಅಪಾಯಕ್ಕೆ ಸಿಲುಕುವ ಜಾನುವಾರುಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲು ಇರುವ ವೈದ್ಯ ಸಿಬ್ಬಂದಿ ಹೆಣಗಾಡಬೇಕಾಗಿದೆ. ಜೊತೆಗೆ ರಜೆ ದಿನಗಳಲ್ಲೂ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ ಇದೆ. ಸಿಬ್ಬಂದಿ ಕೊರತೆ ನಡುವೆಯೂ ಇರುವ ಸಿಬ್ಬಂದಿ ಪಶುಪಾಲಕರಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದಾರೆ.

ಜಾನುವಾರುಗಳು ಅಪಾಯಕ್ಕೆ ಸಿಲುಕಿದ ಸಂದರ್ಭದಲ್ಲಿ ಉದಾಹರಣೆಗೆ ಆಕಳು, ಎಮ್ಮೆಗಳು ಕರು ಹಾಕುವ ಸಂದರ್ಭದಲ್ಲಿ ಸಮಸ್ಯೆಯಾದರೆ ಆ ಕ್ಷಣಕ್ಕೆ ಸ್ಥಳಕ್ಕೆ ಪಶು ವೈದ್ಯರು ಬಾರದೇ ಇದ್ದರೇ ಸಾವಿರಾರು ರೂಪಾಯಿ ಬೆಲೆ ಬಾಳುವ ಆಕಳು ಅಥವಾ ಎಮ್ಮೆ ಸಾವಿಗೀಡಾಗುವ ಸಾಧ್ಯತೆ ಇರುತ್ತದೆ. ಇದರಿಂದ ರೈತರಿಗೆ ದೊಡ್ಡ ನಷ್ಠವಾಗುತ್ತದೆ.

225 ಹುದ್ದೆಗಳು ಖಾಲಿ:

ಜಿಲ್ಲೆಯ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿ ಅಧಿಕಾರಿ, ವೈದ್ಯರು, ಸಿಬ್ಬಂದಿ ಸೇರಿದಂತೆ ಒಟ್ಟು 576 ಮಂಜೂರಾದ ಹುದ್ದೆಗಳಿವೆ. ಆದರೆ, ಇದರಲ್ಲಿ ಕೇವಲ 351 ಹುದ್ದೆಗಳು ಭರ್ತಿ ಇವೆ. ಉಳಿದಂತೆ 225 ಹುದ್ದೆಗಳು ಖಾಲಿ ಇವೆ ಎಂದುವಿಜಯಪುರ ಜಿಲ್ಲಾ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಅಶೋಕ ಎಸ್.ಗೊಣಸಗಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಮುಖ್ಯ ಪಶು ವೈದ್ಯಾಧಿಕಾರಿ(ಆಡಳಿತ) 01, ಪಶು ವೈದ್ಯಾಧಿಕಾರಿಗಳು 24, ಜಾನುವಾರು ಅಧಿಕಾರಿ 03, ಪಶು ವೈದ್ಯಕೀಯ ಪರೀಕ್ಷಕರು 16, ಕಿರಿಯ ಪಶು ವೈದ್ಯಕೀಯ ಪರಿವೀಕ್ಷಕರು 06, ಲ್ಯಾಬ್‌ ಟೆಕ್ನಿಷಿಯನ್‌ 01, ಟೈಪಿಸ್ಟ್‌ 01, ವಾಹನ ಚಾಲಕರು 05 ಹಾಗೂ ಗ್ರೂಪ್‌ ಡಿ ದರ್ಜೆಯ 168 (79 ಅಟೆಂಡರ್ಸ್‌ ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಣೆ) ಸಿಬ್ಬಂದಿ ಖಾಲಿ ಇವೆ.

ರಾಜ್ಯ ಸರ್ಕಾರ ಜಿಲ್ಲೆಗೆ 14 ಪಶು ಸಂಜೀವಿನಿ ಅಂಬುಲೆನ್ಸ್‌ಗಳನ್ನು ನೀಡಿದೆ. ಆದರೆ, ಅಂಬುಲೆನ್ಸ್‌ ಕಾರ್ಯನಿರ್ವಹಣೆಗೆ ಬೇಕಾದ ಚಾಲಕ, ವೈದ್ಯ ಸಿಬ್ಬಂದಿ ಇಲ್ಲದೇ ಪಶುಪಾಲನಾ ಮತ್ತು ಪಶು ವೈದ್ಯಕೋಯ ಸೇವಾ ಇಲಾಖೆಯ ಜಿಲ್ಲಾ ಕಚೇರಿ ಎದುರು ನಿಂತಿವೆ.

ಪಶು ಸಂಜೀವಿನಿ ವಾಹನಗಳ ನೋಂದಾಣಿ ಪ್ರಕ್ರಿಯೆ ಪೂರ್ಣಗೊಂಡಿದೆ. ಈವಾಹನಗಳ ನಿರ್ವಹಣೆಯನ್ನು ಖಾಸಗಿಯವರಿಗೆ ಟೆಂಡರ್‌ ನೀಡಲುರಾಜ್ಯ ಸರ್ಕಾರಉದ್ದೇಶಿಸಿದೆ. ಶೀಘ್ರದಲ್ಲೇ ಈ ಅಂಬುಲೆನ್ಸ್‌ಗಳಿಗೆ ಚಾಲಕರು, ವೈದ್ಯ ಸಿಬ್ಬಂದಿ ನಿಯೋಜಿಸಲಿದೆ ಎನ್ನುತ್ತಾರೆ ಅಶೋಕ ಎಸ್.ಗೊಣಸಗಿ.

1962 ನಂಬರ್‌ಗೆ ರೈತರು ಕರೆ ಮಾಡಿದರೆ ಪಶು ಸಂಜೀವಿನಿ ವಾಹನಗಳು ರೈತರ ಮನೆ ಬಾಗಿಲಿಗೆ ತೆರಳಿ ಜಾನುವಾರುಗಳಿಗೆ ಅಗತ್ಯ ಚಿಕಿತ್ಸೆ, ಔಷಧ ನೀಡಲಾಗುವುದು ಎನ್ನುತ್ತಾರೆ ಅವರು.

ಜಿಲ್ಲಾ ಕೇಂದ್ರವಾದ ವಿಜಯಪುರದಲ್ಲಿ ಒಂದು ಪಾಲಿಕ್ಲಿನಿಕ್‌(ಸೂಪರ್ ಸ್ಪೆಷಾಲಿಟಿ) ಮಾತ್ರ ಇದೆ. 16 ಪಶು ಆಸ್ಪತ್ರೆ, 70 ಪಶು ಚಿಕಿತ್ಸಾಲಯ, 49 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು ಸೇರಿದಂತೆ ಒಟ್ಟು 141 ವಿವಿಧ ‍ಪಶು ವೈದ್ಯಕೀಯ ಸಂಸ್ಥೆಗಳು ಜಿಲ್ಲೆಯಲ್ಲಿ ಇವೆ. ಬಹುತೇಕ ಸಂಸ್ಥೆಗಳಿಗೆ ಕಟ್ಟಡ ಇದೆಯಾದರೂ ಕೆಲವು ಕಡೆ ಹಳೆಯದಾಗಿವೆ.

ಮುಂಜಾಗ್ರತಾ ಕ್ರಮವಾಗಿ ಗಂಟಲು ಬೇನೆಗೆ ಕಳೆದ ಜುಲೈನಲ್ಲಿ ಜಾನುವಾರುಗಳಿಗೆ ವ್ಯಾಕ್ಸಿನ್ ಹಾಕಲಾಗಿದೆ. ಸೆಪ್ಟೆಂಬರ್ 15ರ ನಂತರ ಕಾಲು ಮತ್ತು ಬಾಯಿ ಬೇನೆಗೆ ವ್ಯಾಕ್ಸಿನ್ ಹಾಕಲು ಪ್ರಾರಂಭಿಸುತ್ತೇವೆ. ಕುರಿಗಳಿಗಾಗಿ ಆರ್ ಆರ್ ಆರ್ ವ್ಯಾಕ್ಸಿನ್ ಹಾಕಬೇಕು. ವ್ಯಾಕ್ಸಿನ್ ಸ್ಟಾಕ್ ಇಲ್ಲ. ವ್ಯಾಕ್ಸಿನ್ ಬಂದ ನಂತರ ಹಾಕಲಾಗುವುದು ಎನ್ನುತ್ತಾರೆಅಶೋಕಎಸ್. ಗೊಣಸಗಿ.

ಬುರಣಾಪುರ ಸರ್ಕಾರಿ ಗೋ ಶಾಲೆ

‘ಜಿಲ್ಲೆಗೊಂದು ಗೋ ಶಾಲೆ’ ಯೋಜನೆಯಡಿ ವಿಜಯಪುರ ಸಮೀಪದ ಬುರಣಾಪುರ ಗ್ರಾಮದಲ್ಲಿ 10 ಎಕರೆ ಜಮೀನಿನಲ್ಲಿ ಸರ್ಕಾರಿ ಗೋ ಧಾಮ ನಿರ್ಮಾಣವಾಗಿದೆ. ಆದರೆ, ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಪಶು ಸಂಗೋಪನಾ ಸಚಿವರು ಲೋಕಾರ್ಪಣೆ ಮಾಡಿದ್ದಾರೆ!

ಇವುಗಳ ಹೊರತಾಗಿ ವಿಜಯಪುರದ ಸಿದ್ದೇಶ್ವರ ಸಂಸ್ಥೆಯ ಕಗ್ಗೋಡದಲ್ಲಿರುವ ರಾಮನಗೌಡ ಪಾಟೀಲ ಗೋರಕ್ಷಕ ಕೇಂದ್ರ, ಯಲಗೂರು ಪ್ರಮೋದಾತ್ಮ ಗೋಸಂರಕ್ಷಣಾ ಕೇಂದ್ರ, ಭೂತನಾಳದ ದಿ ಕ್ಯಾಟಲ್‌ ಬ್ರೀಡಿಂಗ್‌ ಆ್ಯಂಡ್‌ ಡೈರಿ ಫಾರ್ಮಿಂಗ್‌ ಅಸೋಸಿಯೇಶನ್‌ ಮತ್ತು ಕರಾಡದೊಡ್ಡಿಯಲ್ಲಿರುವ ಗೋಪಾಲ ವಿದ್ಯಾ ಪ್ರತಿಷ್ಠಾನದ ಹನುಮಗಿರಿ ಗೋಶಾಲೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಖಾಸಗಿ ಗೋಶಾಲೆಗಳಲ್ಲಿ ಕರಾಡದೊಡ್ಡಿ ಹನುಮಗಿರಿ ಗೋಶಾಲೆ(₹ 70 ಸಾವಿರ) ಹೊರತು ಪಡಿಸಿ ಉಳಿದ ಗೋಶಾಲೆಗಳ ನಿರ್ವಹಣೆಗೆ ರಾಜ್ಯ ಸರ್ಕಾರದಿಂದ ತಲಾ ₹2.75 ಲಕ್ಷ ಆರ್ಥಿಕ ನೆರವು ನೀಡಲಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಜಾನುವಾರು ಸಾಕಾಣಿಕೆಗೆ ಉತ್ತಮ ವಾತಾವರಣ ಇದೆ.ರಾಷ್ಟ್ರೀಯ ಜಾನುವಾರು ಮಿಷನ್‌ ಯೋಜನೆ, ಗೋಕುಲ ಮಿಷನ್‌ ಯೋಜನೆ, ಕೌ ಮ್ಯಾಟ್‌ ಸೌಲಭ್ಯ, ಕೃತಕ ಗರ್ಭಧಾರಣೆ ಯೋಜನೆ, ಜಾನುವಾರು ವಿಮಾ ಸೌಲಭ್ಯವಿದೆ. ರೈತರುಸರ್ಕಾರದ ಸೌಲಭ್ಯ ಪಡೆದುಕೊಂಡು ಆಕಳು, ಎಮ್ಮೆ ಸಾಕುವ ಮೂಲಕ ಆರ್ಥಿಕವಾಗಿ ಲಾಭ ಗಳಿಸಬೇಕು. ಇಲಾಖೆಯುಲ್ಲಿ ವೈದ್ಯ ಸಿಬ್ಬಂದಿ ಕೊರತೆ ನಡುವೆಯೂ ಜನರಿಗೆ ಸ್ಪಂದಿಸುವ ಕಾರ್ಯ ಗರಿಷ್ಠ ಪ್ರಮಾಣದಲ್ಲಿ ಮಾಡುತ್ತಿದ್ದೇವೆ.

–ಅಶೋಕ ಎಸ್.ಗೊಣಸಗಿ,ಉಪನಿರ್ದೇಶಕ (ಆಡಳಿತ),ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ವಿಜಯಪುರ

ಪ್ರಜಾವಾಣಿ ತಂಡ: ಬಸವರಾಜ್‌ ಸಂಪಳ್ಳಿ, ಶಾಂತೂ ಹಿರೇಮಠ, ಎ.ಸಿ.ಪಾಟೀಲ, ಶರಣಬಸಪ್ಪ ಗಡೇದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT